Monday, January 4, 2010

ಲಂಕೇಶರ `ಪಾಂಚಾಲಿ'ಯೊಂದಿಗೆ


`ಮೇಸ್ಟ್ರನ್ನ ಹಿಂದಕ್ಕೂರಿಸ್ಕಂಡ್ ಒಸಿ ಸುತ್ತಿದೀನ ಬಸುರಾಜು... ಹೋಗ್ದೆ ಇರ ಜಾಗ್ವೇ ಇಲ್ಲ, ನಂದೋ ಲಡಾಸ್ ಸ್ಕೂಟ್ರು, ನಾನಾಗ ಅಂತಾ ದಪ್ಕಿರಲಿಲ್ಲ, ಮೇಸ್ಟ್ರು ಜೋರಾಗಿದ್ರು, ಒಳ್ಳೆ ಎದ್ದಾಳು, ಇಬ್ರು ಸೇರದ್ರೆ ಏನಾಗನ ಅದು, ಎಳೀವಳ್ದು ನಾವ್ ಬುಡ್ತಿಲ್ಲ... ಪೆಟ್ರೋಲ್ಗೂ ಕಾಸಿಲ್ಲ, ನಮ್ ಪೆಟ್ರೋಲ್ಗುವೆ... ಅಂತಾದ್ರಲ್ಲಿ ಮೇಸ್ಟ್ರು ಹುಚ್ಚತ್ತಿಸ್ಕಂಡವ್ರೆ, ಲೇ ಗೌಡ, ನಂಗೊತ್ತಿಲ್ಲ ಸ್ಪೆಷಲ್ ಇಷ್ಯೂ ತರ್ಬೇಕು ಕಣಲೇ ಅಂತರೆ...'
`ಪಾಂಚಾಲಿ ಹೆಂಗ್ಬಂತು ಗೌಡ್ರೆ...' ಎಂದು ನೆಲಮನೆ ಪ್ರಕಾಶನದ ದೇವೇಗೌಡ್ರನ್ನ- ಅವರು ಸಾಯುವುದಕ್ಕೆ ಮುಂಚಿನ ಆರೇಳು ತಿಂಗಳಿನಲ್ಲಿ, ಹೀಗೆ ಸಂಜೆಯ `ಕೂತು ಮಾತಾಡುವ' ತಂಪು ಹೊತ್ತಿನಲ್ಲಿ ಕೇಳಿದಾಗ, ಪಾಂಚಾಲಿ ಹುಟ್ಟಿದ್ದು, ಮೇಸ್ಟ್ರು ತಲೆಕೆಡಿಸಿಕೊಂಡಿದ್ದು, ಕಾಸಿಗಾಗಿ ಪರದಾಡಿದ್ದು, ಹೊಸ ತಲೆಮಾರಿನ ಲೇಖಕ/ಲೇಖಕಿಯರನ್ನು ಪಟ್ಟಿ ಮಾಡಿದ್ದು, ಮಾಡುವಾಗ ಎದುರಾದ ಸಮಸ್ಯೆಗಳು, ಅನಗತ್ಯ ವಾದ-ವಿವಾದಗಳು, ಮನಸ್ತಾಪಗಳು, ಜಗಳಗಳು... ಹೀಗೆ ಎಲ್ಲವನ್ನೂ ಸ್ವಾರಸ್ಯಕರವಾಗಿ ಬಿಚ್ಚಿಡತೊಡಗಿದರು.
ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ'ಗಲ್ಲ; `ಪಾಂಚಾಲಿ' ಎಂಬ ವಿಶೇಷ ಸಂಚಿಕೆಗೆ. 1974ರಲ್ಲಿ ಹೊರಬಂದ ಇದು `ಪ್ರಜಾವಾಣಿ' ದೀಪಾವಳಿ ವಿಶೇಷಾಂಕವನ್ನು ಹೋಲುವ ಆಕಾರ ಮತ್ತು ಸೈಜ್ನಲ್ಲಿತ್ತು. ಇದು ಕೂಡ `ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ' ಎಂಬ ಹಣೆಪಟ್ಟಿ ಹಚ್ಚಿಕೊಂಡಿತ್ತು. ಆ ಕಾಲಕ್ಕೇ ನವ್ಯ, ವೈಚಾರಿಕ, ಪ್ರಗತಿಪರ ಆಲೋಚನೆಗಳ ಸಿಡಿಗುಂಡುಗಳಂತಹ ಲೇಖಕರಿದ್ದ, ಚಿಂತನೆಗಚ್ಚುವ ಬರಹಗಳಿಂದ ಕೂಡಿದ, ಈ ಕಾಲಕ್ಕೂ ವಿಶಿಷ್ಟವಾದ ಅಪರೂಪದ ಅದ್ಭುತ ಸಂಚಿಕೆ.
ಲಂಕೇಶರ ಒಡನಾಟಕ್ಕೆ ಬಿದ್ದಾಗಿನಿಂದಲೂ, ಅವರಿಗೆ ಸಂಬಂಧಪಟ್ಟ ಹತ್ತಾರು ವಿಷಯಗಳನ್ನು ಅರಿಯುವ, ಅರಗಿಸಿಕೊಳ್ಳುವ, ಅದರಲ್ಲೇ ಏನೋ ಒಂದು ಖುಷಿ ಕಾಣುವ ನನಗೆ, ಅವರಿಗೆ ಹತ್ತಿರವಾದಂತೆಲ್ಲ ಅರ್ಥವಾಗದವರಂತೆಯೇ ಕಾಣುತ್ತಿದ್ದರು. ಆ ವ್ಯಕ್ತಿತ್ವವೇ ಅಂಥಾದ್ದು- ವಿಸ್ಮಯ, ವಿಚಿತ್ರ. ಎಪ್ಪತ್ತರ ದಶಕದಲ್ಲಿ ಲಂಕೇಶರು ಸಂಪಾದಿಸಿದ್ದ `ಪಾಂಚಾಲಿ'ಯ ಬಗೆಗಿನ ಬೆರಗು ಕೂಡ ಅಂಥಾದ್ದೇ ಒಂದಾಗಿ ಬುದ್ಧಿಗೆಡಿಸಿತ್ತು. ಏನಾದರೂ ಮಾಡಿ ಅದನ್ನೊಂದು ಸಲ ನೋಡಬೇಕು, ಓದಬೇಕು ಎಂದು ನೇರವಾಗಿ ಹೋಗಿ ಲಂಕೇಶರನ್ನೇ ಕೇಳಿದ್ದೆ. ಅದಕ್ಕವರು ಎಂದಿನ ತಮ್ಮ ಉಡಾಫೆಯಿಂದ, `ಅದ್ನೆಲ್ಲ ಯಾರಿಡ್ತರಲೇ...' ಎಂದು ಒಂದೇ ಸಾಲಿನ ಉತ್ತರದಲ್ಲೇ ಎಲ್ಲವನ್ನೂ ಹೇಳಿ ಸುಮ್ಮನಾಗಿಸಿದ್ದರು.
ಅವರಿದ್ದದ್ದೇ ಹಾಗೆ- ನಿರ್ಲಕ್ಷಿಸುವ ಮೂಲಕ ಕುತೂಹಲ ಕೆರಳಿಸುವುದು. ನಿರಾಕರಿಸುವ ಮೂಲಕ ನಿರೀಕ್ಷೆಯ ಬೀಜ ಬಿತ್ತುವುದು. ಹಳೆಯದನ್ನು ಕಂಡರೆ ಕಣ್ಣರಳಿಸುವುದು, ಅಷ್ಟೇ ಬೇಗ ಖಿನ್ನರಾಗುವುದು. ಇದನ್ನು ಅವರ ನಡವಳಿಕೆಗಳಿಂದ ಖುದ್ದಾಗಿ ಕಂಡಿದ್ದೆ. ಪತ್ರಿಕೆಯಲ್ಲಿ, ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ ಅವರ ಕೆಲ ಅಭಿಮಾನಿಗಳು ಅವರಿಗೆ ಸಂಬಂಧಿಸಿದ ಅಪರೂಪದ ಹಳೆಯ ವಸ್ತುಗಳನ್ನು ತಂದು ಕೊಡುತ್ತಿದ್ದರು. ಅವರ ಕೆಲವೇ ಕೆಲವು ಸ್ನೇಹಿತರು ಆಗಾಗ ಬಂದು ಮರೆತುಹೋದ ವಿಷಯಗಳನ್ನು ಜ್ಞಾಪಿಸುತ್ತಿದ್ದರು. ಅದನ್ನೆಲ್ಲ ಬಹಳ ಸಂಭ್ರಮದಿಂದಲೇ ಸವಿಯುತ್ತಿದ್ದರು.
ಒಂದು ಸಲ ಹೀಗೆಯೇ, ಯಾರೋ ಅವರ ಅಭಿಮಾನಿಯೊಬ್ಬರು, ಅವರ ಒಂದು ಹಳೆಯ ಫೋಟೋವನ್ನು- ಸುಮಾರು ವರ್ಷಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ್ದದ್ದನ್ನು- ಪೋಸ್ಟ್ ಮುಖಾಂತರ ಕಳುಹಿಸಿಕೊಟ್ಟಿದ್ದರು. ಅದು ಸುಮಾರು ಎಪ್ಪತ್ತರ ದಶಕದ್ದು, ಬ್ಲ್ಯಾಕ್ ಅಂಡ್ ವೈಟ್ ಕಾಲದ್ದು. ತುಂಬಾ ಚೆನ್ನಾಗಿತ್ತು. ಮೇಸ್ಟ್ರು ಹ್ಯಾಂಡ್ಸಮ್ಮಾಗಿದ್ದರು. ಆ ಫೋಟೋ ನಮ್ಮ ಪಾಲಿಗೆ ನಿಧಿ. ಮೇಸ್ಟ್ರಿಗೆ ತೆಗೆದುಕೊಂಡು ಹೋಗಿ ಕೊಟ್ಟೆ, ನೋಡಿದರು, ಮಾತಿಲ್ಲ, ಮುಖದಲ್ಲಿ ಯಾವ ಭಾವನೇನೂ ಇಲ್ಲ. ತಕ್ಷಣ ಹರಿದು ಕಸದಬುಟ್ಟಿಗೆ ಹಾಕಿದರು. `ಜೀವವಿರುವ ನಾನೇ ಇರುವಾಗ, ಜೀವವಿಲ್ಲದ ಫೋಟೋ ಯಾಕೆ' ಎಂಬ ಭಾವ. ಸೇಡ್, ಬೋದಿಲೇರ್, ಕಾಮು, ಕಾಫ್ಕಾ ಎಲ್ಲ ಲಂಕೇಶರಲ್ಲಿಯೇ. ಒಂದೇ ಗಳಿಗೆಯಲ್ಲಿಯೇ. ಅಲ್ಲಿ ನಿಲ್ಲಲಿಕ್ಕೇ ಹೆದರಿಕೆಯಾಯಿತು.
ಈತನ್ಮಧ್ಯೆ ಒಂದ್ಸಲ ಊರಿಗೆ ಹೋಗಿದ್ದೆ, ಅದು 1992. ನಮ್ಮ ಮನೆ ಶಿಫ್ಟ್ ಮಾಡ್ತಿದ್ದರು. ಹಳೆಮನೆಯಿಂದ ಹೊಸಮನೆಗೆ ಸಾಮಾನು ಸಾಗಿಸುತ್ತಿದ್ದರು. ಅದರಲ್ಲಿ ಪುಸ್ತಕಗಳ ಒಂದು ದೊಡ್ಡ ಗಂಟೂ ಇತ್ತು. ಅದನ್ನು ನಮ್ಮಣ್ಣ ಕೆದಕುತ್ತ, ಅವನ ಮೈಸೂರಿನ ಮಹಾರಾಜ ಕಾಲೇಜಿನ ನೆನಪಿನ ಬುತ್ತಿಯನ್ನು ಬಿಚ್ಚಿಕೊಂಡಿದ್ದ. `ಬಸ್ವಾ, ಇದ್ ನೋಡಿದ್ದಾ ನೀನು...' ಎಂದು ರಾಗ ಎಳೆದ. ನೋಡಿದ್ರೆ ಪಾಂಚಾಲಿ!
ಗಂಟಿನಲ್ಲಿ ಇದ್ದದ್ದಕ್ಕೋ ಏನೋ ಹಳದೀ ಬಣ್ಣಕ್ಕೆ ತಿರುಗಿತ್ತು, ಜಿರಲೆಗಳ ಜಬರಾಟದಿಂದ ಕವರ್ ಪೇಜ್ ತೂತ್ ತೂತಾಗಿತ್ತು, ಕೈಗೆತ್ತಿಕೊಂಡರೆ ಗಮ್ಮಂತ ವಾಸನೆ ಬತರ್ಿತ್ತು. 1974ರಲ್ಲಿ ಪ್ರಕಟವಾಗಿದ್ದು, ಸುಮ್ಮನೆ ಲೆಕ್ಕ ಹಾಕಿದೆ... ಅವತ್ತಿಗೆ ಪಾಂಚಾಲಿಗೆ ಹದಿನೆಂಟು ವರ್ಷವಾಗಿತ್ತು, ಹರೆಯದ ಹುಡುಗಿಯ ಬೆವರಿನ ವಾಸನೆ ಮೂಗಿಗಡರುತ್ತಿತ್ತು! ಅಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅಣ್ಣನನ್ನು ಅಲ್ಲೇ ಬಿಟ್ಟು ಪಾಂಚಾಲಿಯನ್ನು ಎತ್ತಿಕೊಂಡು ಓಡಿದೆ. ಯಾರೂ ಇಲ್ಲದ ಜಾಗ ನೋಡಿ ಪಾಂಚಾಲಿಯ ನಿರಿಗೆಗಳಂಥ ಪುಟಗಳನ್ನು ನಿಧಾನವಾಗಿ ಬಿಚ್ಚತೊಡಗಿದೆ.

ಪುಟ ತಿರುವಿದಂತೆಲ್ಲ ಪುಟಿದೇಳುತ್ತಿದ್ದ ಉತ್ಸಾಹ... ಕಣ್ಣಿಗೆ ಬಿದ್ದಳು ನೀಲು-
`ಹಾಲು ಹಿಂಡುವ ಹರಯದ
ಅವಳ ಬೆರಳಲ್ಲಿ
ಆಕಳ ಮೊಲೆಯ
ಪುಲಕ'
ನೀಲು ಜೊತೆಗೆ ಹಾದಿಮನಿ, ಎಂಎಸ್ ಮೂತರ್ಿ ಬರೆಯುತ್ತಿದ್ದಂಥದೇ ಚಿತ್ರ. ಅಂದ್ರೆ ನೀಲು ಹುಟ್ಟಿದ್ದು 1974ರಲ್ಲಿ. ಪಾಂಚಾಲಿ ಹೊಟ್ಟೆಯಲ್ಲಿ. ಅರೆ, ಅವತ್ತಿಗೆ ಪಾಂಚಾಲಿಗೂ ಹದಿನೆಂಟು, ನೀಲೂಗೆ ಹದಿನೆಂಟು!
ಹಾಗೇ ನೋಡ್ತಾ ಹೋದೆ, ಮೇಸ್ಟ್ರ ಹಸ್ತಾಕ್ಷರವೂ ಇದೆ. ಕುವೆಂಪು ಅವರನ್ನು ಸಂದಶರ್ಿಸಲು, ಅವರಿಗೆ ಮೊದಲೇ ಕೆಲವು ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೈ ಬರಹವನ್ನೇ ನೆಗಟಿವ್ ಮಾಡಿಸಿ ಯಥಾವತ್ ಪ್ರಕಟಿಸಿದ್ದಾರೆ. ಮೇಸ್ಟ್ರ ಅಕ್ಷರಗಳು- ದಪ್ಪ, ಇದ್ದಕ್ಕಿದ್ದಂತೆ ಸಣ್ಣ, ಮತ್ತೆಲ್ಲೋ ಬಾಣ ಹಾಕಿ ಅತಿ ಸಣ್ಣಗೆ ಕೊರೆದಿದ್ದಾರೆ. ಕುವೆಂಪು ಆ ಪ್ರಶ್ನೆಗಳಿಗೆಲ್ಲ ವಿವರವಾಗಿ ಉತ್ತರಿಸಿದ್ದಾರೆ. ಒಂದೊಂದು ಪ್ರಶ್ನೆಯೂ ಎದೆಗೇ ನೇರವಾಗಿ ಬಾಣ ಬಿಟ್ಟಂತೆ. ಉತ್ತರವೂ ಅಷ್ಟೇ- ಯಾವ ಅನುಮಾನಕ್ಕೂ ಆಸ್ಪದವೀಯದಂತೆ. ಆ ಸಂದರ್ಶನ ಆ ಸಂಚಿಕೆಯ ವಿಶೇಷ. ಇಬ್ಬರು ದಿಗ್ಗಜರ ನಡುವಿನ ಅಪರೂಪದ, ಕನ್ನಡ ಸಾಹಿತ್ಯಲೋಕದಲ್ಲಿ ಮಹತ್ವದ ಸ್ಥಾನ ಪಡೆದ ಸಂದರ್ಶನಗಳಲ್ಲೊಂದು ಎಂಬುದು ನನ್ನ ಗ್ರಹಿಕೆ.
ಇದರಷ್ಟೇ ಮುಖ್ಯವಾದ `ಪಾಂಚಾಲಿ'ಯ ಮತ್ತೊಂದು ಅಂಶವೆಂದರೆ, ಕನರ್ಾಟಕದ ಪ್ರತಿಭಾವಂತ ತರುಣ ಜನಾಂಗ- ಲೇಖಕರು, ಚಿತ್ರಕಾರರು, ವೈದ್ಯರು, ಅಧ್ಯಾಪಕರು, ಇತ್ಯಾದಿ ಎಂದು ನಲವತ್ತೇಳು ಜನರನ್ನು ಗುರುತಿಸಿರುವುದು. ಅವರ ಚಿತ್ರಗಳನ್ನು ಹಾಕಿ, ಒಂದು ಪುಟ್ಟ ಪ್ಯಾರಾದಲ್ಲಿ ಅವರ ಪರಿಚಯವನ್ನೂ ನೀಡಿರುವುದು. ಅದರಲ್ಲಿ ದೇವನೂರ ಮಹಾದೇವರಿಂದ ಹಿಡಿದು ಎಚ್.ಎನ್.ನಂಜೇಗೌಡರವರೆಗೆ, ಪ್ರೊಫೆಸರ್ ನಂಜುಂಡಸ್ವಾಮಿಯವರಿಂದ ಹಿಡಿದು ಕೆ.ವಿ.ತಿರುಮಲೇಶ್ರವರೆಗೆ, ಎಚ್.ಎಲ್.ಕೇಶವಮೂತರ್ಿಯವರಿಂದ ಹಿಡಿದು ಗಿರೀಶ್ ಕಾನರ್ಾಡರವರೆಗೆ, ಭಾರ್ಗವಿ ನಾರಾಯಣ್ರಿಂದ ಹಿಡಿದು ಚಂದ್ರಶೇಖರ ಕಂಬಾರರವರೆಗೆ... ಕನರ್ಾಟಕ ಕಂಡ ಅತಿರಥ ಮಹಾರಥರೆಲ್ಲ ಅಲ್ಲಿದ್ದಾರೆ. ಅಂದಿನ ಕಪ್ಪು-ಬಿಳುಪಿನ ಮಸಕು ಮಸಕಾದ ಫೋಟೋಗಳು. ಕೆಲವು ಹೆಬ್ಬರಳ ಗಾತ್ರವಾದರೆ, ಇನ್ನು ಕೆಲವು ಸ್ಟಾಂಪ್ ಸೈಜ್, ಎಲ್ಲೋ ಒಂದೆರಡು ಮಾತ್ರ ದೊಡ್ಡವು. ಇವತ್ತು ಅವರೆಲ್ಲ ಏನೇನೋ ಆಗಿಹೋಗಿದ್ದಾರೆ. ಕೆಲವರು ಇದ್ದಾರೆ, ಇನ್ನು ಕೆಲವರು ಇಹಲೋಕ ತ್ಯಜಿಸಿದ್ದಾರೆ.
ಹಾಗೇ ಪುಟ ತಿರುವಿದರೆ, ಒಂದು ಪೇಜಿನಲ್ಲಿ ಒಂದು ಕವನ ಮತ್ತು ಪುಟ್ಟ ಬರಹವಿದೆ. ಕವನ ದೇವನೂರ ಮಹಾದೇವರದು, ಲೇಖನ ಶ್ರೀಧರ ಕಲಿವೀರರದು. ಇವರಿಬ್ಬರ ಬರಹಕ್ಕೆ ಹೆಡ್ಡಿಂಗು- ಇಬ್ಬರು `ಹೊಲೆಯ' ಬುದ್ಧಿಜೀವಿಗಳ ರಕ್ತಸಂವೇದನೆಯ ಮಾತುಗಳು. ಆಮೇಲೆ ಎರಡೇ ಸಾಲಿನ ಇಂಟ್ರೋ- `ಇವರಿಬ್ಬರು ಹೊಲೆಯರು. ಹೊಲೆಯರಾಗಿರುವುದರ ನೋವು, ಹಿಂಸೆ, ನರಕ ಮತ್ತು ವಿಚಿತ್ರ ಕನಸು ಇವರಿಗೆ ಗೊತ್ತು' ಎಂದು ಬರೆಯಲಾಗಿದೆ. ಇದು ಇವತ್ತಿಗೂ ಯಾವ ಪತ್ರಿಕೆಯಲ್ಲೂ ಕಾಣದ್ದು- ಅವತ್ತಿಗೇ ಲಂಕೇಶರು ಕಂಡಿರಿಸಿದ್ದು.

ಶ್ರೀಕೃಷ್ಣ ಆಲನಹಳ್ಳಿಯವರ `ಪರಸಂಗದ ಗೆಂಡೆತಿಮ್ಮ' ಕಾದಂಬರಿ ಮೊಟ್ಟ ಮೊದಲ ಬಾರಿಗೆ ಬೆಳಕು ಕಂಡಿದ್ದೇ `ಪಾಂಚಾಲಿ'ಯಲ್ಲಿ. ಆನಂತರ ಅದು ಚಲನಚಿತ್ರವಾಗಿದ್ದು, ಚಿತ್ರರಸಿಕರ ಮನ ಗೆದ್ದಿದ್ದು, ಸಿನಿಲೋಕದಲ್ಲಿ ಸದ್ದು ಮಾಡಿದ್ದು. ಆಲನಹಳ್ಳಿಯವರ `ಗೆಂಡೆತಿಮ್ಮ' ಗಂಭೀರ ವಸ್ತುವುಳ್ಳ ಉತ್ಕೃಷ್ಟ ಕಾದಂಬರಿ. ಕಥಾನಾಯಕ ಗೆಂಡೆತಿಮ್ಮ ಫ್ಯಾಷನ್ ವಸ್ತುಗಳನ್ನು ಮಾರಾಟ ಮಾಡುವ ಅನ್ಫ್ಯಾಷನಬಲ್ ಮನುಷ್ಯ. ಆತ ತನಗೆ ಗೊತ್ತಿಲ್ಲದಂತೆಯೇ ತನ್ನ ಸಾಮಾನುಗಳನ್ನು ಮಾರಾಟ ಮಾಡುವ ಮೂಲಕ ಹಳ್ಳಿಗಳಲ್ಲಿ ಬದಲಾವಣೆಗಳನ್ನು, ದುರಂತವನ್ನು ಬಿತ್ತುತ್ತಾನೆ. ಗೆಂಡೆತಿಮ್ಮನ ಕಥಾವಸ್ತು- ಫ್ಯಾಷನ್ ವಸ್ತುಗಳು ಹಳ್ಳಿ ಪ್ರವೇಶಿಸುವಂಥಾದ್ದು, ಒಂದು ರೀತಿಯಲ್ಲಿ ಭವಿಷ್ಯ ಭಾರತದ್ದು. ಅಂದರೆ 1974ರಲ್ಲಿಯೇ ಶ್ರೀಕೃಷ್ಣ ಆಲನಹಳ್ಳಿಯವರು ಜಾಗತೀಕರಣವನ್ನು ಗ್ರಹಿಸಿದ್ದರು. `ಸಿನಿಮಾ ಮತ್ತು ಜಾಗತೀಕರಣ' ಎಂಬ ವಿಷಯದ ಬಗ್ಗೆ ಯಾರಾದರು ಗಂಭೀರವಾದ ಸಂವಾದ ಏರ್ಪಡಿಸಿದರೆ- ಅದರಲ್ಲಿ ಮುಖ್ಯವಾಗಿ ಚಚರ್ೆಗೆತ್ತಿಕೊಳ್ಳಲೇಬೇಕಾದ ಚಿತ್ರವಾಗಿ `ಗೆಂಡೆತಿಮ್ಮ' ಅಗ್ರಪಂಕ್ತಿಯಲ್ಲಿದ್ದರೆ ಆಶ್ಚರ್ಯವಿಲ್ಲ. ಹಳ್ಳಿಗಳಿಗೆ ಪೆಟ್ಟಿಕೋಟ್, ಬ್ರಾ, ಗಮಂದೆಣ್ಣೆ ಪ್ರವೇಶ ಪಡೆಯುವ ಮೂಲಕ ಹಳ್ಳಿಯಲ್ಲಾಗುವ ಬದಲಾವಣೆಗಳನ್ನು ಆಲನಹಳ್ಳಿ ಅಂದೇ ಚಿತ್ರಿಸಿದ್ದರು.
ಬೆಸಗರಹಳ್ಳಿ ರಾಮಣ್ಣ, ಶಾಂತಿನಾಥ ದೇಸಾಯಿ, ವೀಣಾ, ಸೀತಾ, ಗೀತಾ ಕುಲಕಣರ್ಿ, ಸಿದ್ಧಲಿಂಗ ಪಟ್ಟಣಶೆಟ್ಟರ ಕತೆಗಳು, ಚೆನ್ನವೀರ ಕಣವಿ, ಲಂಕೇಶ್, ಚದುರಂಗರ ಕವಿತೆಗಳು, ಚಂಪಾರ ಜಗದಂಬೆ- ಇಂದಿರಾಗಾಂಧಿಯನ್ನು ದುಗರ್ಿಯನ್ನಾಗಿ ಚಿತ್ರಿಸಿದ ನಾಟಕ, ಚಿದಾನಂದಮೂತರ್ಿ, ಜಿಎಸ್ಸೆಸ್, ನಿಸಾರ್ ಅಹಮದ್, ಸಿದ್ಧಲಿಂಗಯ್ಯ, ತೇಜಸ್ವಿ, ಎಚ್ಚೆಲ್ಕೆ, ಪ್ರೊ.ಎಂಡಿಎನ್ರ ಲೇಖನಗಳು... ಯಾವ ಪ್ರತಿಷ್ಠಿತ ಪ್ರತಿಕೆಯೂ- ತನ್ನ ಓದುಗ ವಲಯ, ತಾನು ಕಟ್ಟಿಕೊಂಡ ಸಕ್ಯರ್ುಲೇಷನ್ ಸಾಮ್ರಾಜ್ಯ ಮತ್ತು ತಾನು ಗಳಿಸಿಕೊಂಡ ಸಾಹಿತ್ಯಕ, ಸಾಂಸ್ಕೃತಿಕ ಸ್ಥಾನಮಾನಗಳ ಆಧಾರದ ಮೇಲೆ- ರೂಪಿಸಲಾಗದಿದ್ದ ಸಂಚಿಕೆಯನ್ನು ಮೇಸ್ಟ್ರು, ಸರಿಯಾಗಿ ಕೂರಲು ಒಂದು ಕಚೇರಿ ಕೂಡ ಇಲ್ಲದ ಸ್ಥಿತಿಯಲ್ಲಿ ಕೆಲವೇ ಕೆಲವು ಗೆಳೆಯರೊಳಗೂಡಿ ರೂಪಿಸಿದ್ದರು. ಒಂದು ರೀತಿಯಲ್ಲಿ ಅದು ಶೂನ್ಯ ಸಂಪಾದನೆ. ಮತ್ತೊಂದು ರೀತಿಯಲ್ಲಿ ಲಂಕೇಶರ ದೈತ್ಯ ಪ್ರತಿಭೆಯ ಅನಾವರಣ.
ಪೊಗದಸ್ತಾಗಿರುವ ಪಾಂಚಾಲಿಯಲ್ಲಿ ಭವಿಷ್ಯದ ಊರ್ವಶಿ ಎಂದು ವನಮಾಲಾ ವಿಶ್ವನಾಥ್ರನ್ನು, ಪ್ರತಿಭಾವಂತ ನರ್ತಕಿ ಎಂದು ಉಮಾ ಎಂಬ ಭರತನಾಟ್ಯ ಕಲಾವಿದೆಯನ್ನು ಪರಿಚಯಿಸುವ ಲೇಖನಗಳೂ ಇವೆ. ಆಶ್ಚರ್ಯವೆಂದರೆ, ಈ ಲೇಖನಗಳನ್ನು ಬರೆದವರು ನೀಲು!
ಇಷ್ಟೆಲ್ಲ ಇದ್ದ ಪಾಂಚಾಲಿಯೊಂದಿಗೆ ಅದೆಷ್ಟು ರಾತ್ರಿಗಳನ್ನು ಕಳೆದಿದ್ದೆನೋ? ಹೀಗೇ ನಡೆದಿತ್ತು ಪಾಂಚಾಲಿಯೊಂದಿಗೆ ನನ್ನ ಸಂಸಾರ! ಇದರ ನಡುವೆಯೇ ಪಾಂಚಾಲಿಯನ್ನು ಮೇಸ್ಟ್ರಿಗೆ ತೋರಿಸುವ ಆಸೆಯೂ ಗರಿಗೆದರತೊಡಗಿತು. ಹಾಗೆಯೇ ಪಾಂಚಾಲಿ ನನ್ನವಳು ಎಂದರೆ? ಇಟ್ಟುಕೊಂಡರೆ ಓಕೆ, ಇದಕ್ಕೂ ಆ ಫೋಟೋಗಾದ ಗತಿಯಾದರೆ? ಈ ಅನುಮಾನ, ಹೆದರಿಕೆಗಳೆಲ್ಲ ನನ್ನೊಳಗೇ ಥಳಕು ಹಾಕಿಕೊಂಡು, ಅವರಿಗೆ ತೋರಿಸುವ ಧೈರ್ಯವೇ ಬರಲಿಲ್ಲ. ಆದರೆ ಪಾಂಚಾಲಿಯ ನೀಲು ಮಾತ್ರ ತಲೆಕೆಡಿಸುತ್ತಲೇ ಇತ್ತು. ಆ ಚಿತ್ರ-ಬರಹ ಬೇರೆ ಥರಾನೇ ಕಾಣಿಸುತ್ತಿತ್ತು. ಮೇಸ್ಟ್ರಿಗೆ ಗೊತ್ತಿಲ್ಲದಂತೆ ಪತ್ರಿಕೆಯಲ್ಲಿ ಪ್ರಕಟಿಸಿಬಿಡುವ ಕೆಟ್ಟ ಧೈರ್ಯವನ್ನೂ ಕೊಡುತ್ತಿತ್ತು.
ಪತ್ರಿಕೆಯಲ್ಲಿ ಸಾಮಾನ್ಯವಾಗಿ ಒಂದು ವಾರಕ್ಕೆ ಮೂರು ನಾಲ್ಕು ನೀಲುಗಳನ್ನು ಹಾಕುತ್ತಿದ್ದೆವು. ಪತ್ರಿಕೆಯ ಪೇಜ್ ಡಿಸೈನ್ ಮಾಡುತ್ತಿರುವಾಗ ಒಂದು ಕಡೆ ಜಾಗ ಉಳಿದರೆ, ಅಲ್ಲಿ ನೀಲು ಹಾಕುತ್ತಿದ್ದೆವು. ಜಾಗ ಚಿಕ್ಕದಿದ್ದರೆ ಬರೀ ನೀಲು, ದೊಡ್ಡದಾಗಿದ್ದರೆ ಚಿತ್ರಸಹಿತ. ಇದನ್ನು ಮುಂಚೆಯೇ ಯೋಚಿಸಿ, ಮೇಸ್ಟ್ರಿಂದ ನೀಲುಗಳನ್ನು ಬರೆಸಿಟ್ಟುಕೊಂಡಿದ್ದರೆ, ಅದಕ್ಕೆ ತಕ್ಕಂತೆ ಕಲಾವಿದರಿಂದ ಚಿತ್ರ ಬರೆಸಿ, ಅದನ್ನು ಪಾಸಿಟಿವ್ ಮಾಡಿಸಿ, ಚಿತ್ರ ಮತ್ತು ನೀಲು- ಎರಡನ್ನೂ ಒಂದು ಬಾಕ್ಸ್ ಮಾಡುವುದು ಒಂದು ರೂಢಿಯಾಗಿತ್ತು.
ಲಂಕೇಶರಿಂದ ನೀಲು ಬರೆಸುವುದು... ಆ ನೀಲು ಸೃಷ್ಟಿಯೇ ಸೋಜಿಗದ್ದು. ಮೇಸ್ಟ್ರೇನೋ ನಿಂತ ನಿಲುವಿನಲ್ಲಿಯೇ ಬರೆದುಕೊಡುತ್ತಿದ್ದರು. ಆದರೆ ಆ ನೀಲು ಬರೆಯಲು ಆರ್ಡನರಿ ಪೆನ್ ಆಗುತ್ತಿರಲಿಲ್ಲ. ಅದಕ್ಕಾಗಿ ಪೇಸ್ಟಪ್ ರಾಜಗೋಪಾಲ್ರಿಂದ ರೋಟ್ರಿಂಗ್ ಪೆನ್ನು, ಕಂಪ್ಯೂಟರ್ ಸೆಕ್ಷನ್ನಲ್ಲಿ ಬಳಸುವ ಟ್ರೇಸಿಂಗ್ (ಇದಕ್ಕೂ ಮೊದಲು ಬಟರ್ ಶೀಟ್ ಇತ್ತು) ಪೇಪರ್ ಎರಡನ್ನೂ ತೆಗೆದುಕೊಂಡು ಹೋಗಿ ಮೇಸ್ಟ್ರ ಟೇಬಲ್ ಮೇಲಿಟ್ಟರೆ, ಅವರಿಗೆ ಸಮಯ ಸಿಕ್ಕಾಗ, ಮೂಡ್ ಬಂದಾಗ ಬರೆದು ಕೊಡುತ್ತಿದ್ದರು. ಅಷ್ಟರೊಳಗೆ ಆ ಟ್ರೇಸಿಂಗ್ ಪೇಪರ್ಗಳು ನೀರು-ಕಾಫಿ-ವ್ಹಿಸ್ಕಿ ಕುಡಿದು ಕೂತಿರುತ್ತಿದ್ದವು. ಮೆತ್ತಗಾದರೆ ಅವುಗಳನ್ನು ಬಳಸಲು ಬರುತ್ತಿರಲಿಲ್ಲ. ಮತ್ತೆ ಕೊಟ್ಟು, ಅಲ್ಲೆ ನಿಂತು ಬರೆಸಿಕೊಳ್ಳಬೇಕಾಗಿತ್ತು. ಆಗೆಲ್ಲ ಅವರಿಂದ, `ನಿಂದೊಳ್ಳೆ ಕಾಟ ಕಣಲೇ...' ಎಂಬ ಬೈಗಳ ಇದ್ದೇ ಇತ್ತು.
ಹೀಗೆ... ಒಂದು ವಾರ ಮೇಸ್ಟ್ರು ಬರೆದುಕೊಟ್ಟ ನೀಲು ಖಾಲಿಯಾಗಿದ್ದವು. ಪಾಂಚಾಲಿಯ ನೀಲುಗಳು ಪ್ರಚೋದಿಸುತ್ತಿದ್ದವು. ಪಾಂಚಾಲಿಯಲ್ಲಿದ್ದ ಒಂದು ನೀಲುವನ್ನು- ಚಿತ್ರಸಹಿತ ಪತ್ರಿಕೆಯಲ್ಲಿ, ಮೇಸ್ಟ್ರ ಅನುಮತಿಯಿಲ್ಲದೆ, ಪಾಂಚಾಲಿಯಿಂದ ಎಂಬ ಅಡಿಟಿಪ್ಪಣಿ ಕೂಡ ಇಲ್ಲದೆ ಮರು ಮುದ್ರಿಸಿದೆ. ಪತ್ರಿಕೆ ಪ್ರಿಂಟಾಗಿ ಬಂದ ದಿನ ನನ್ನ ತಳಮಳ ನನಗೇ ಗೊತ್ತು. ಮೇಸ್ಟ್ರು ಬಂದ್ರು, ಪತ್ರಿಕೆಯ ಪುಟಗಳನ್ನು ತಿರುವಿಹಾಕುತ್ತಿದ್ದಾರೆ, ನಾನು ಹೊರಗೆ ಯಾವಾಗ ಕರೀತಾರೋ ಏನ್ ಅಂತಾರೋ ಇವತ್ತು ಏನ್ ಕಾದಿದೆಯೋ ಎಂದು ಒದ್ದಾಡುತ್ತಿದ್ದೇನೆ.
ಆಶ್ಚರ್ಯ ಅಂದ್ರೆ, ರೂಮಿನಿಂದ ಹೊರಗೆ ಬಂದವರೆ, `ಎಲ್ಲಿತ್ತಲೇ, ಎಲ್ಲೋ ಹುಡುಕ್ಬುಟ್ಟಿದಿಯಾ...' ಎಂದರು. ಅವರ ನೀಲು ಅವರಿಗೇ ಚಕಿತಗೊಳಿಸಿದ್ದಳು. ಹೊಸ ಹುಡುಗಿ ಸಿಕ್ಕಷ್ಟೇ ಖುಷಿಯಲ್ಲಿದ್ದರು. ನನ್ನ ಆತಂಕವೆಲ್ಲ ಕರಗಿ ಕೂಲಾಗಿ, `ಊರಲ್ಲಿತ್ತು ಸಾರ್, ನಮ್ಮಣ್ಣನತ್ರಿತ್ತು ತಗಂಬಂದೆ...' ಅಂದೆ.
`ನಾನೇ ನೋಡಿಲ್ವಲೋ, ಕೊಡಿಲ್ಲಿ...' ಎಂದರು. ಯಾರ್ಯಾರದೋ ಕಣ್ತಪ್ಪಿಸಿ ಕಾಪಾಡಿಕೊಂಡು ಬಂದಿದ್ದ ಪಾಂಚಾಲಿಯನ್ನು ಕೈಗೆ ಕೊಡುತ್ತ ಅವರ ಮುಖ ನೋಡಿದೆ. ನನ್ನ ತಲೆತುಂಬಾ ಆ ಫೋಟೋಗಾದ ಗತಿ ತುಂಬಿತ್ತು. ಅವರು, `ನಿನ್ನ ಪಾಂಚಾಲಿಗೇನೂ ಮಾಡಲ್ಲ, ಕೊಡೋ...' ಎಂದು ಅವತ್ತಿನ ರಜಾ ದಿನವನ್ನು ಅವಳೊಂದಿಗೆ ಕಳೆದರು. ಅವರೇ ಮಾಡಿದ ಅವರ ಪಾಂಚಾಲಿಯ ಬಗ್ಗೆ ಹದಿನೆಂಟು ವರ್ಷಗಳ ನಂತರ ಏನನ್ನಬಹುದೆನ್ನುವ ಕುತೂಹಲ, ಕಾತರವಿತ್ತು. ಅದಕ್ಕೆ ತಕ್ಕಂತೆ ಅವರ ಮನಸ್ಸು ಕೂಡ ಆವತ್ತಿನ ಕ್ಷಣಗಳನ್ನು ಮೆಲುಕು ಹಾಕುತ್ತಿತ್ತು. ಹಾಗಾಗಿ ಮಾರನೆ ದಿನ ಹೋಗಿ ಅವರ ಮುಂದೆ ನಿಂತೆ.
ಇವನು ಇದಕ್ಕೇ ಬಂದಿದ್ದಾನೆಂಬುದನ್ನು ಗ್ರಹಿಸಿ, `ಪರವಾಗಿಲ್ಲ ಕಣೋ, ಚೆನ್ನಾಗಿದೆ. ಆ ಟೈಮೇ ಹಂಗಿತ್ತು... ಸಂಥಿಂಗ್ ನ್ಯೂ ಅಂಡ್ ಡಿಫರೆಂಟ್... ಜೊತೆಗೆ ಅನ್ನಿಸಿದ್ದನ್ನ ಹೇಳುವ ಧೈರ್ಯ, ಹೇಳುವಾಗ ಬಳಸಬೇಕಾದ ಬುದ್ಧಿವಂತಿಕೆ ಎರಡೂ ಮುಖ್ಯ. ಇದರಲ್ಲಿ ಬರ್ದಿರೋ ಎಲ್ರಲ್ಲೂ ಅದಿದೆ, ಅದ್ಕೆ ಇದು ಚೆನ್ನಾಗಿದೆ...' ಎಂದವರೆ ಅಷ್ಟೇ ತುಂಟತನದಿಂದ, ಪಾಂಚಾಲಿಯನ್ನೇ ನನಗೆ ಧಾರೆ ಎರೆದು ಕೊಟ್ಟಂತೆ, `ತಗೋ, ಮಜಾ ಮಾಡೋಗು' ಎಂದರು.
ಅಷ್ಟೊತ್ತಿಗಾಗಲೇ ಪಾಂಚಾಲಿಗಾಗಿ ನನ್ನಂತೆಯೇ ಹುಡುಕಾಡುತ್ತಿದ್ದ ಅಗ್ರಹಾರ ಕೃಷ್ಣಮೂರ್ತಿಯವರಿಗೆ `ಪಾಂಚಾಲಿ' ನನ್ನ ಹತ್ತಿರ ಇರುವುದು ತಿಳಿದು, `ಬಸು, ನನಗೊಂದು ಝೆರಾಕ್ಸ್ ಕಾಪಿ ಬೇಕಲ್ಲ...' ಅಂದರು. ಆಮೇಲೆ ನಟರಾಜ್ ಹುಳಿಯಾರ್, ಎಸ್.ಎಸ್.ಶಂಕರ್... ಹೀಗೆ ಕೇಳಿದವರೆಲ್ಲರಿಗೂ ಕೊಟ್ಟಿದ್ದಾಯಿತು. ಹಾಗೆಯೇ ಅದರಲ್ಲಿರುವ ಅಷ್ಟೂ ನೀಲುಗಳನ್ನು ಮತ್ತೆ ಮತ್ತೆ ಪತ್ರಿಕೆಯಲ್ಲಿ ಪ್ರಕಟಿಸಿದ್ದೂ ಆಯಿತು.
ಲಂಕೇಶರ ಪಾಂಚಾಲಿ ಬಗ್ಗೆ ಲಂಕೇಶರೇ ಹೀಗಂದ ಮೇಲೆ, ಅದರ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಇಮ್ಮಡಿಗೊಂಡು ಮತ್ತೆ ಮತ್ತೆ ಓದತೊಡಗಿದೆ. ಹೊಸ ತಲೆಮಾರಿನ ಕಲಾವಿದರ ಬಗ್ಗೆ ತೇಜಸ್ವಿ, ದಲಿತರ ಬಗ್ಗೆ ಪ್ರೊಫೆಸರ್ ನಂಜುಂಡಸ್ವಾಮಿ, ಜೆಪಿ-ಬಸವಲಿಂಗಪ್ಪನವರ ಬಗ್ಗೆ ಲಂಕೇಶ್, ಬೂಸಾ ಪ್ರಕರಣದ ಬಗ್ಗೆ ಸಿದ್ಧಲಿಂಗಯ್ಯ... ಅಂದಿನ ತುರ್ತಿಗೆ ತಕ್ಕಂತೆ ಎಲ್ಲರೂ ಒಂದು ಮನಸ್ಸಿನಂತೆ ಸ್ಪಂದಿಸಿರುವುದು ಎದ್ದು ಕಾಣತೊಡಗಿತು. ನಾಡನ್ನು ಒಂದು ಚಳುವಳಿಗೆ ಸಿದ್ಧಗೊಳಿಸಿದಂತಿತ್ತು.
ಕರ್ನಾಟಕದ ಸಾಹಿತ್ಯಕ, ಸಾಂಸ್ಕೃತಿಕ ಜಗತ್ತನ್ನು ಸಮೃದ್ಧಗೊಳಿಸಿದ ಆ ಕ್ರಿಯಾಶೀಲ ಮನಸ್ಸುಗಳು ಇವತ್ತು, ಪಾಂಚಾಲಿ ಹೊರಬಂದ ಮೂವತ್ತೈದು ವರ್ಷಗಳ ನಂತರ, ಒಬ್ಬೊಬ್ಬರು ಒಂದೊಂದು ಬಾವಿಯಾಗಿದ್ದಾರೆ. ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿದ್ದಾರೆ. ಕಾಲ-ಬುದ್ಧಿ-ಬದುಕು ಅವರನ್ನು ಬದಲಾಯಿಸಿತೆ ಅಥವಾ ಬಲಿ ತೆಗೆದುಕೊಂಡಿತೆ?