Thursday, November 5, 2015

ಮಾಯಾಕನ್ನಡಿಯಲ್ಲಿ ಕಂಡದ್ದು


ಕನ್ನಡ ಸಾಹಿತ್ಯ ಲೋಕಕ್ಕೆ ಫ್ರೆಂಚ್‌ನ ನವ್ಯಕವಿ ಚಾರ್ಲ್ಸ್ ಬೋದಿಲೇರ್‌ ಪರಿಚಯವಾಗಿದ್ದು 1974ರಲ್ಲಿ. ಪಿ. ಲಂಕೇಶರು ಆತನ ’ಪ್ಲ್ಯೊರ್‌ ದ್‌ ಮಾಲ್‌’ ಕೃತಿಯನ್ನು ಕನ್ನಡಕ್ಕೆ ’ಪಾಪದ ಹೂಗಳು’ ಎಂದು ಅನುವಾದಿಸುವ ಮೂಲಕ. ಹಾಗೆ ನೋಡಿದರೆ, 70ರ ದಶಕ ಹೊಸತನಕ್ಕೆ ಗರಿಗೆದರಿದ ಕಾಲ. ನವ್ಯ ಸಾಹಿತ್ಯದ ನವಚೈತನ್ಯದ ಕಾಲ. ಜಡ್ಡುಗಟ್ಟಿದ ಕನ್ನಡ ಸಾಹಿತ್ಯಕ್ಕೆ ಶಾಕ್‌ ಕೊಟ್ಟ ಕಾಲ.
ನವ್ಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಲಂಕೇಶರು ಸಹಜವಾಗಿಯೇ ಬೋದಿಲೇರ್‌ನ ಪ್ರಭಾವಕ್ಕೆ ಒಳಗಾಗಿ, ಮಾಲ್‌ ಕೃತಿಯನ್ನು ಕನ್ನಡಕ್ಕೆ ತಂದರು. ಕಾಟಾಚಾರಕ್ಕಾಗಿ ಕರೆತಂದಿದ್ದಲ್ಲ, ಬೋದಿಲೇರನ ಬನಿಯನ್ನು, ಭಾವವನ್ನು ಕನ್ನಡ ಭಾಷೆಗಿಳಿಸಿದ್ದರು. ಅದು ಆ ಕಾಲಕ್ಕೆ, ಕನ್ನಡ ಸಾಹಿತ್ಯಲೋಕಕ್ಕೆ ವಿಶಿಷ್ಟ ಒಗರನ್ನು ಕೊಟ್ಟ ಕೃತಿಯಾಗಿತ್ತು. ಆ ಕೃತಿ, ಸಾಹಿತಿಯನ್ನು ಹಾಗೂ ಆತನ ಸಾಹಿತ್ಯವನ್ನು ಪ್ರೀತಿಸದೆ ಅನುವಾದ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಕಂಡಿರಿಸಿತ್ತು. ಹಾಗೆಯೇ ಲಂಕೇಶರ ವಿಶಿಷ್ಟತೆ ಮತ್ತು ವಿಕ್ಷಿಪ್ತತೆಯನ್ನೂ ಹೊರಹಾಕಿತ್ತು.
’ಪಾಪದ ಹೂಗಳು’ ಮೊದಲ ಮುದ್ರಣ ಕಂಡಿದ್ದು 1974ರಲ್ಲಿ, ಮೈಸೂರಿನ ನೆಲಮನೆ ದೇವೇಗೌಡರ ನೆಲಮನೆ ಪ್ರಕಾಶನದಿಂದ. ಅದಾಗಿ ಸರಿ ಸುಮಾರು 20 ವರ್ಷಗಳ ನಂತರ, 1993ರಲ್ಲಿ ಪಾಪದ ಹೂಗಳು ಕೃತಿ, ಲಂಕೇಶರೇ ಪ್ರಾರಂಭಿಸಿದ ’ಪತ್ರಿಕೆ ಪ್ರಕಾಶನ’ದಿಂದ ನಾಲ್ಕನೆ ಮುದ್ರಣ ಕಂಡಿತ್ತು.
ಆ ಸಂದರ್ಭದಲ್ಲಿ ಲಂಕೇಶರು ನಾಲ್ಕನೆ ಮುದ್ರಣಕ್ಕೆ ಮುನ್ನುಡಿ ಬರೆದು ನನ್ನ ಕೈಗಿಟ್ಟು, ’ನೆಲಮನೆ ದೇವೇಗೌಡನದೊಂದು ಮಳೆ ಜೋಡಿಸುವ ಪ್ರಿಂಟಿಂಗ್‌ ಪ್ರೆಸ್‌ ಇತ್ತು. ನಮಗೆ ಅವನು, ಅವನಿಗೆ ನಾವು ಅನ್ನುವ ದಿನಗಳವು. ಒಂದು ದಿನ ಬೋದಿಲೇರ್‌ನ ’ಮಾಲ್‌’ ಪುಸ್ತಕದ ಕೆಲವು ಪುಟಗಳನ್ನು ಅನುವಾದ ಮಾಡಿ, ನೆಲಮನೆ ದೇವೇಗೌಡನಿಗೆ ಕೊಟ್ಟಿದ್ದಲ್ಲ.. ತೋರಿಸಿ, ಐದುನೂರು ರೂಪಾಯಿ ಅಡ್ವಾನ್ಸ್ ಪಡೆದಿದ್ದೆ...’ ಎಂದು ಸುಮ್ಮನಾದರು. ಸ್ಪಲ್ಪ ಹೊತ್ತು ಬಿಟ್ಟು, ’ಕುಡಿಯಲಿಕ್ಕೆ ಕಾಸಿಲ್ಲದೆ...’ ಎಂದು ನಗಾಡಿದರು.
’ಪಾಪದ ಹೂಗಳು’ ಪುಸ್ತಕದಲ್ಲಿದ್ದ ’ಸದಾ ಕುಡಿದಿರು... ಏನನ್ನಾದರೂ; ವೈನ್‌, ಕಾವ್ಯ, ಋಜುತ್ವ...’ಕ್ಕೆ ನನಗೆ ಉತ್ತರ ಸಿಕ್ಕಿತ್ತು. ಲಂಕೇಶರಲ್ಲಿ ಕಾವ್ಯ ಕಟ್ಟುವ ಕಸುಬುದಾರಿಕೆ ಇತ್ತು, ಕುಡಿಯುವ ಚಟವಿತ್ತು, ಇದ್ದದ್ದನ್ನು ಇದ್ದಂಗೆ ಹೇಳುವ ದಾಢಸಿ ಗುಣವೂ ಇತ್ತು. ಬೋದಿಲೇರನ ಕಾಮ ಮತ್ತು ಖಿನ್ನತೆ, ಹತಾಶೆ ಮತ್ತು ಆಕ್ರೋಶ ಲಂಕೇಶರಲ್ಲೂ ಕಾಣತೊಡಗಿತ್ತು.
ಕೇವಲ 46 ವರ್ಷಗಳಷ್ಟೇ ಬದುಕಿದ್ದ ಬೋದಿಲೇರ್‌, ಇದ್ದಷ್ಟು ದಿನವೂ ಸಂಘರ್ಷಕ್ಕೆ ಒಡ್ಡಿಕೊಂಡು ಬದುಕಿದ್ದ. ಆ ಕಾಲಕ್ಕೇ ವಿಕ್ಷಿಪ್ತವೆನ್ನಿಸಿದ ತನ್ನ ಬರಹಗಳಿಂದ ಸಮಕಾಲೀನ ಸಮಾಜದ ನೈತಿಕ ಪ್ರಜ್ಞೆಗೆ ಸವಾಲಾಗಿದ್ದ. ನಶ್ವರ ವಸ್ತುಗಳನ್ನು ನಿರ್ಲಕ್ಷಿಸುತ್ತಲೇ ನಿಸರ್ಗವನ್ನು ಆಸಕ್ತಿಯಿಂದ ಅವಲೋಕಿಸುತ್ತಿದ್ದ. ಜಡಗೊಂಡ ಓದುಗರನ್ನು ತನ್ನ ಅನುಭವದಿಂದ ಬೆಚ್ಚಿ ಬೀಳಿಸದೆ ಇರುವ ಲೇಖಕ ಲೇಖಕನೇ ಅಲ್ಲ; ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೇ ಕಾಲಕ್ಕೆ ಎರಡು ಮುಖಗಳು ಗೋಚರಿಸುತ್ತವೆ- ಒಂದು ದೇವರು, ಮತ್ತೊಂದು ದೆವ್ವ ಎಂದಿದ್ದ.
ಇಂತಹ ಬೋದಿಲೇರ್‌ನನ್ನು ಕನ್ನಡಕ್ಕಿಳಿಸಿದ ಲಂಕೇಶರು, ಇದು ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ. ಅವನ ನರಕ ನೋಡಿಯಾದರೂ ನಮ್ಮ ಓದುಗರು ಎಚ್ಚರಗೊಳ್ಳಲಿ ಎಂಬುದು ನನ್ನಾಸೆ ಎಂದು ’ಪಾಪದ ಹೂವುಗಳ’ನ್ನು ಅನುವಾದಿಸಿದ್ದರು. ಫ್ರೆಂಚಿನ ಪಾಪದ ಹೂಗಳನ್ನು ಲಂಕೇಶರು ಕನ್ನಡಕ್ಕೆ ಕರೆತಂದ 40 ವರ್ಷಗಳ ನಂತರ, ಬೋದಿಲೇರ್‌ನ ಗದ್ಯರೂಪದ ಐವತ್ತು ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೆ ಕರೆತಂದಿದ್ದಾರೆ, ಲಂಕೇಶರ ಆಪ್ತ ಬಳಗದವರಲ್ಲೊಬ್ಬರಾದ ಹೊಸ ತಲೆಮಾರಿನ ವಿಶಿಷ್ಟ ಬರಹಗಾರ ಎಸ್‌.ಎಫ್‌. ಯೋಗಪ್ಪನವರ್‌.
’ಮಾಯಾಕನ್ನಡಿ’ ಎಂಬ ಈ ಕೃತಿಯಲ್ಲಿ ಐವತ್ತು ಗಪದ್ಯಗಳಿವೆ. ಇವು ಬೋದಿಲೇರ್‌ನ ಮಾನವೀಯ ಸಂವೇದನೆಯ ಕೊನೆಯ ಕಾವ್ಯಧ್ವನಿ ಎನ್ನುವಂತೆ, ಕಾಲವನ್ನು ಜಯಿಸಿ ಹೊರಬಂದಂತೆ, ತೀವ್ರವಾಗಿ ಅನುಭವಿಸಿ ಅರಗಿಸಿಕೊಂಡಂತೆ, ಪ್ರತಿಯೊಂದು ಕವಿತೆಯೂ ಓದುಗನನ್ನು ಮುಟ್ಟಿ ಮಾತನಾಡಿಸುವಂತಿದೆ. ಅದಕ್ಕೆ ಕಾರಣ ಯೋಗಪ್ಪನವರ ಸಮರ್ಥ ಕನ್ನಡೀಕರಣ, ಅನುವಾದದಲ್ಲಿ ಕುದುರಿದ ಕುಸುರಿತನ. ಅದು ಪ್ರತಿ ಪುಟದಲ್ಲೂ ಕಾಣುತ್ತದೆ.
ನಿಮ್ಮ ಚಿತ್ತ ಕೆಡಿಸುವ ಅಂತಹ ಕೆಲವು ಕಥನಗಳೆಂದರೆ...
"ಎಂಥ ಪೋಲಿ ಆತ್ಮ ನನ್ನದು, ಜಗತ್ತಿನ ತುಂಬೆಲ್ಲಾ ತಿರುಗಾಡಿ, ನನ್ನ ಮಗ್ಗುಲಲ್ಲಿರುವುದನ್ನೇ ನೋಡಲಿಲ್ಲ.’’
"ಅಯ್ಯೋ, ನಮ್ಮಂಥ ಅನಿಷ್ಟ ಮುದುಕಿಯರಿಗೆ ಮುಗ್ಧ ಮಗುವನ್ನು ಕೂಡ ಖುಷಿಪಡಿಸುವ ಕಾಲ ಮುಗಿದುಹೋಯಿತು. ಸದ್ಯ ನಾವು ಕೈಗೂಸುಗಳನ್ನು ಎತ್ತಿ ಆಡಿಸಬೇಕೆಂದರೂ ಅವುಗಳಲ್ಲಿ ನಾವು ಭಯ ಹುಟ್ಟಿಸುತ್ತೇವೆ, ಬೆದರುಬೊಂಬೆಗಳಂತೆ."
"ಆಕೆ ನಡೆದುಹೋಗುತ್ತಿದ್ದರೆ ಆಕೆಯ ತುಂಬಿದ ನಿತಂಬಗಳ ಮೇಲಿನ ತೆಳ್ಳಗಿನ ನಡು ಸಹಜವಾಗಿ ಬಳಕುತ್ತಿತ್ತು. ಆಕೆಯ ಗುಲಾಬಿ ವರ್ಣದ ರೇಷ್ಮೆಯ ಹೊರಉಡುಪು, ಆಕೆಯ ಮೈಬಣ್ಣಕ್ಕೆ ವಿಭಿನ್ನವಾದ ಉತ್ಕೃಷ್ಟ ವ್ಯತ್ಯಾಸವಾಗಿತ್ತು. ಆಕೆಯ ಬೆನ್ನ ಹಿಂದಿನ ಇಳಿಜಾರು ನಿಡಿದಾದ ನಡುವನ್ನು ಅಪ್ಪಿ ಹಿಡಿದಿತ್ತು. ಆಕೆಯ ನೆಟ್ಟಗಿನ ಮೊಲೆಗಳು ಮೊನಚಾಗಿ ಚುಚ್ಚುತ್ತಿದ್ದವು.’’
"ಇದು ಕುಡಿಯುವ ಸಮಯ. ನೀನು ಕಾಲದ ಗುಲಾಮನಾಗಿ ಹುತಾತ್ಮನಾಗುವ ಬದಲು ಏನನ್ನಾದರೂ ಕುಡಿ. ಆದರೆ ಕುಡಿ ಯಾವ ಅಡೆತಡೆಯಿಲ್ಲದೇ ಕುಡಿ, ಮದಿರೆಯನ್ನು, ಕಾವ್ಯವನ್ನು, ಸಜ್ಜನಿಕೆಯನ್ನು. ನೀನು ಆಯ್ಕೆ ಮಾಡಿಕೊಂಡಂತೆ ಏನನ್ನಾದರೂ ಕುಡಿ.’’
"ನಾನೊಬ್ಬ ಕವಿ, ಆದರೆ ನೀನು ತಿಳಿದಂತೆ ನಾನು ಅಷ್ಟು ಅವಿವೇಕಿಯಲ್ಲ, ಮತ್ತು ನಿನ್ನ ಈ ಅಮೂಲ್ಯ ಗೋಳುಗಳನ್ನು ಹೆಚ್ಚು ಮಾಡುತ್ತ ನನ್ನನ್ನು ಆಯಾಸಗೊಳಿಸಿದರೆ ನೀನು ಸರಿಪಡಿಸಲಸಾಧ್ಯವಾದ ಹೆಂಡತಿಯೆಂದು ತಿಳಿದು ಕಿಟಕಿಯಿಂದ ಖಾಲಿ ಬಾಟಲಿ ಎಸೆದಂತೆ ಎಸೆದುಬಿಡುವೆ.’’
ನಿರಾಕರಿಸುತ್ತಲೇ, ನಿಖರತೆ ತೋರುವ; ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಲೇ, ಬದುಕುವ ಆಶೆ ಚಿಗುರಿಸುವ; ಯಾತನೆ ಅನುಭವಿಸುತ್ತಲೇ, ಸುಖದ ಬುನಾದಿಯ ಬುಡಕ್ಕಿಳಿಯುವ; ಒಂದರೊಳಗೊಂದು ಕರಗುವ, ಕಾಣುವ, ಪ್ರತಿದಿನದ ಅಸಂಖ್ಯಾತ ಅಸ್ಖಲಿತ ಆಕೃತಿಗಳನ್ನು ನಮಗೇ ತೋರುವ ಮಾಯಾಕನ್ನಡಿ.
ಈ ಮಾಯಾಕನ್ನಡಿಯ ಬರಹಗಳನ್ನು ಓದುತ್ತಿದ್ದಂತೆ ನನಗನ್ನಿಸಿದ್ದು, ಇವತ್ತಿನ ಹೊಸ ತಲೆಮಾರಿನ ಬರಹಗಾರರು ಬಹಳ ಉತ್ಸಾಹದಿಂದ ಬರೆಯುತ್ತಿದ್ದಾರೆ. ಆದರೆ ಅವರಾರೂ ನವ್ಯ, ನವೋದಯ, ಬಂಡಾಯಗಳೆಂಬ ಯಾವ ಗುಂಪಿಗೂ ಸೇರದವರು. ಎಡಪಂಥೀಯ, ಬಲಪಂಥೀಯ ಎಂಬ ಪಂಥಕ್ಕೂ ಕಟ್ಟಿಹಾಕಿಕೊಳ್ಳದವರು. ಗಾಂಧಿ, ಮಾರ್ಕ್ಸ್, ಲೋಹಿಯಾಗಳ ವಾದಕ್ಕೂ ಒಗ್ಗದವರು. ಅಂದರೆ ಇವುಗಳಿಂದ ಹೊರತಾದವರು ಎಂದಲ್ಲ, ಇವುಗಳೊಳಗೇ ಇದ್ದೂ ಇಲ್ಲದಂತಿರುವವರು. ಯಾರು ಏನನ್ನು ಬೇಕಾದರೂ ಬರೆದೂ ಬೇರೆಯೇ ಆದವರು. ಇಂತಹ ಬರಹಗಾರರಿಗೆ ಬೋದಿಲೇರ್‌ ಖಂಡಿತ ಇಷ್ಟವಾಗುತ್ತಾನೆ. ಅವರ ಕನಸು, ಕನವರಿಕೆ, ಕಲ್ಪನೆಗಳಿಗೆ ಈ ಮಾಯಾಕನ್ನಡಿ ಚಿಮ್ಮು ಹಲಗೆಯಾಗುವುದರಲ್ಲಿ, ಭಿತ್ತಿಯೊಳಗಿನ ಭಾವಕ್ಕೆ ಬರಹರೂಪ ದಕ್ಕುವುದರಲ್ಲಿ ಅನುಮಾನವಿಲ್ಲ. ಆ ಕಾರಣಕ್ಕಾಗಿಯಾದರೂ ಹೊಸಗಾಲದ ಬರಹಗಾರರು ಈ ಪುಸ್ತಕವನ್ನೊಮ್ಮೆ ಓದುವುದೊಳಿತು.
ಇನ್ನು ಈ ಪುಸ್ತಕವನ್ನು ಕೈಗೆತ್ತಿಕೊಂಡರೆ ಅದರ ಅಚ್ಚುಕಟ್ಟುತನಕ್ಕೆ ಮಾರುಹೋಗದೆ ಇರಲಾಗದು. ಪುಸ್ತಕವನ್ನು ಪಲ್ಲವ ಪ್ರಕಾಶನ ಪ್ರೀತಿಯಿಂದಲೇ ಪ್ರಕಟಿಸಿದೆ. ಆ ಪ್ರೀತಿ ಪುಟವಿನ್ಯಾಸದಲ್ಲಿ, ಮುದ್ರಣದ ಅಚ್ಚುಕಟ್ಟುತನದಲ್ಲಿ ಎದ್ದು ಕಾಣುತ್ತದೆ. ಹಾಗೆಯೇ ಪುಟವಿನ್ಯಾಸಕ್ಕೆ ಬಳಸಿಕೊಂಡಿರುವ ಕಲಾವಿದ ಹಾದಿಮನಿಯವರ ರೇಖಾಚಿತ್ರಗಳು- ಬೋದಿಲೇರನನ್ನು ಬೊಗಸೆಯಲ್ಲಿ ಕುಡಿದು ಗೆರೆಗಿಳಿಸಿದಂತಿವೆ, ಪುಟ ವಿನ್ಯಾಸದ ಅಂದಕ್ಕೆ ಮೆರಗು ತಂದಿವೆ. ಅಂತೆಯೇ ಬರಹಕ್ಕೆ ಬಳಸಿರುವ ಈ ಚಿತ್ರಗಳೇ ಓದುಗನ ಕಲ್ಪನೆಯನ್ನೂ ಕೊಂದಿವೆ, ಇರಲಿ.
ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಬಂದಿರುವ ಅನುವಾದಗಳಲ್ಲಿ ಈ ಪುಸ್ತಕ ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ಆ ಕಾರಣಕಾಗಿ ಬಹಳ ಕಾಲ ಓದುಗನ ಮನಸ್ಸಿನಲ್ಲಿ ಉಳಿಯುತ್ತದೆ.

ಮಾಯಾಕನ್ನಡಿ
ಐವತ್ತು ಗದ್ಯ ಕವಿತೆಗಳು
ಮೂಲ: ಬೋದಿಲೇರ್‌ (ಲೇ ಸ್ಪ್ಲೀನ್‌ ಡಿ ಪ್ಯಾರಿಸ್‌)
ಕನ್ನಡಕ್ಕೆ: ಎಸ್‌.ಎಫ್‌. ಯೋಗಪ್ಪನವರ್‌
ಪ್ರಕಾಶನ: ಪಲ್ಲವ ಪ್ರಕಾಶನ
ಚನ್ನಪಟ್ಟಣ ಪೋಸ್ಟ್, ಬಳ್ಳಾರಿ-583 113
ಪುಟ: 156, ಬೆಲೆ: 200

Friday, June 5, 2015

ಪುಟ್ಟಣ್ಣ ಕಣಗಾಲ್ ಇಲ್ಲವಾಗಿ ಇಂದಿಗೆ 30 ವರ್ಷ: ಒಂದು ನೆನಪು

ಪುಟ್ಟಣ್ಣ ಕಣಗಾಲ್
ಜೂನ್ 5, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕಣ್ಮರೆಯಾದ ದಿನ. ಅವರು ಬದುಕಿದ್ದು ಕೇವಲ 53 ವರ್ಷಗಳು. ಹಾಗೆ ನೋಡಿದರೆ ಅದು ಸಾಯುವ ವಯಸ್ಸಲ್ಲ. ಆದರೆ ಭಾವಜೀವಿ ಪುಟ್ಟಣ್ಣ ಬದುಕನ್ನು ಕೂಡ ಭಾವನಾತ್ಮಕ ನೆಲೆಯಲ್ಲಿಯೇ ನೋಡಿ ನವೆದು ನೀಗಿಕೊಂಡರು. ತಮ್ಮ ಬದುಕನ್ನೆ ‘ಮಾನಸ ಸರೋವರ’ ಚಿತ್ರವನ್ನಾಗಿಸಿ, ಒಳ ತುಮುಲವನ್ನೇ ತೆರೆದಿಟ್ಟು ತಿಳಿಯಾದರು.  
ಇಂತಹ ವಿಭಿನ್ನ ವ್ಯಕ್ತಿತ್ವದ ಪುಟ್ಟಣ್ಣ ಕಣಗಾಲ್ ಇಲ್ಲವಾಗಿ ಇವತ್ತಿಗೆ ಮೂವತ್ತು ವರ್ಷಗಳಾದವು. ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಇಂದು ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ನೆನಪಿನ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ರಾಜೇಂದ್ರಸಿಂಗ್ ಬಾಬು, ಅಂಬರೀಷ್, ಬಿ. ಸರೋಜಾದೇವಿ, ಜಯಂತಿ, ಲೀಲಾವತಿ, ಭಾರತಿ, ಶ್ರೀನಾಥ್ ರಂತಹ  ಕನ್ನಡ ಚಿತ್ರರಂಗದ ಹಿರಿಯ ಕಲಾವಿದರೆಲ್ಲ ಒಂದೆಡೆ ಸೇರಿ, ಪುಟ್ಟಣ್ಣನವರನ್ನು ಸ್ಮರಿಸಲಿದ್ದಾರೆ.
ಪುಟ್ಟಣ್ಣ ಎಂದಾಕ್ಷಣ ನೆನಪಿಗೆ ಬರುವುದು ಬೆಳ್ಳಿಮೋಡ, ಗೆಜ್ಜೆಪೂಜೆ, ನಾಗರಹಾವು ಚಿತ್ರಗಳು. 1967 ರಲ್ಲಿ ಬಂದ 'ಬೆಳ್ಳಿಮೋಡ' ಚಿತ್ರ ತ್ರಿವೇಣಿಯವರ ಕಾದಂಬರಿಯನ್ನು ಆಧರಿಸಿತ್ತು. ಕವಿ ಬೇಂದ್ರೆಯವರ ‘ಮೂಡಣ ಮನೆಯ ಮುತ್ತಿನ ತೇರಿನ…’ ಕವನವನ್ನು ಒಳಗೊಂಡಿತ್ತು. ಕಲ್ಪನಾರ ನೈಜ ಅಭಿನಯ ಅನಾವರಣಗೊಂಡಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲರ ಅಭಿರುಚಿಯನ್ನು ತೆರೆಯ ಮೇಲೆ ತೆರೆದಿಟ್ಟಿತ್ತು. ಈ ಚಿತ್ರ ಅವರ ಮೊದಲ ಚಿತ್ರವಾಗಿದ್ದು, ಸಿನಿಮಾ ತಯಾರಿಕೆಯ ಕುಸುರಿ ಕೆಲಸದಿಂದ ಗೆದ್ದಿತ್ತು. ಹೊಸ ಭರವಸೆಯನ್ನು ಹುಟ್ಟುಹಾಕಿತ್ತು. ಬಹುಕಾಲ ನೆನಪಿಸಿಕೊಳ್ಳುವಂತಹ ಚಿತ್ರಗಳ ಸಾಲಿಗೆ ಸೇರಿತ್ತು.
ಇಂತಹ ಪುಟ್ಟಣ್ಣ ನಿರ್ದೇಶಿಸಿದ ಚಿತ್ರಗಳು ಹಲವಾರು, ಸೃಷ್ಟಿಸಿದ ಪಾತ್ರಗಳು ನೂರಾರು. ಅವರ ರಾಮಾಚಾರಿ, ಜಲೀಲ್, ಚಾಮಯ್ಯ ಮೇಸ್ಟ್ರು… ಇವತ್ತಿಗೂ ಚಿತ್ರರಸಿಕರ ಭಾವಭಿತ್ತಿಯಲ್ಲಿ ಅಚ್ಚಳಿಯದೇ ಉಳಿದಿವೆ. ಶುಭಮಂಗಳದ ಈ ಶತಮಾನದ ಹೆಣ್ಣು, ಎಡಕಲ್ಲು ಗುಡ್ಡದ ಮೇಲಿನ ವಿರಹಿ ಜಯಂತಿ, ರಂಗನಾಯಕಿಯ ಆರತಿ, ಮಾನಸ ಸರೋವರದ ಶ್ರೀನಾಥ್ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಂತಕತೆಗಳಾಗಿ ದಾಖಲಾಗಿಹೋಗಿದ್ದಾರೆ.
ಮೇಲಿನ ಅಷ್ಟೂ ಚಿತ್ರಗಳು ಮತ್ತು ಪಾತ್ರಗಳನ್ನು ಅವಲೋಕಿಸಿದರೆ, ಪುಟ್ಟಣ್ಣನವರ ಶಕ್ತಿ ಇರುವುದು ಕೌಟುಂಬಿಕ ಕಥನಗಳಲ್ಲಿ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಭಾವನಾತ್ಮಕ ಎಳೆಯನ್ನು ವೈಯಕ್ತಿಕ ನೆಲೆಯನ್ನು ತೆರೆಯ ಮೇಲೆ ತರುವುದರಲ್ಲಿರುವ ಅವರ ಅಸಾಧಾರಣ ಪ್ರತಿಭೆ ಎದ್ದು ಕಾಣುತ್ತದೆ. ಆದರೆ ಇವರ ಈ ಪ್ರತಿಭೆ ಮಧ್ಯಮವರ್ಗವನ್ನು ಮೀರಿ ಹೋಗಲಿಲ್ಲ ಎನ್ನುವುದೂ ಗಮನಕ್ಕೆ ಬರುತ್ತದೆ.    
ಬಿ.ಆರ್. ಪಂತುಲು ಗರಡಿಯಲ್ಲಿ ಪಳಗಿದ ಪುಟ್ಟಣ್ಣ, ಚಿತ್ರ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲಿಯೂ ಪರಿಣತಿ ಪಡೆದಿದ್ದರು. ಸಿನಿಮಾಗಳ ಕಡುಮೋಹಿಯಾಗಿದ್ದರು. ಚಿತ್ರ ನಿರ್ಮಾಣದಲ್ಲಿ ಶಾಸ್ತ್ರೀಯ ಕಲಿಕೆಯನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಚಿತ್ರಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಟ್ಟುಕೊಂಡಿದ್ದರು. ನಿರ್ದೇಶಕನಿಗೆ ಘನತೆ ಗೌರವ ತಂದು, ಸಿನಿಮಾ ಎನ್ನುವುದು ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಸಾಧಿಸಿ ತೋರಿದವರು.  
ಇಂತಹ ಪುಟ್ಟಣ್ಣ ವೈಯಕ್ತಿಕ ಬದುಕಿನಲ್ಲಿ ತಮ್ಮ ಚಿತ್ರಗಳ ಪಾತ್ರಗಳಂತೆಯೇ ಭಾವುಕರಾಗಿದ್ದರು. ತಮ್ಮ ಅಂತಿಮ ದಿನಗಳಲ್ಲಿ ತಾವೇ ಕಟ್ಟಿಸಿದ ತಮ್ಮ ಹೊಸ ಮನೆಯ ಗೃಹಪ್ರವೇಶದಂದು ಇಟ್ಟಿಗೆಯ ಮೇಲೆ ತಲೆ ಇಟ್ಟು, ತಮ್ಮ ಆತ್ಮೀಯ ಗೆಳೆಯ ವಿಜಯನಾರಸಿಂಹರಿಂದ ‘ನೀನೇ ಸಾಕಿದ ಗಿಣಿ…’ ಹಾಡು ಬರೆಸಿದ್ದರು. ಆ ಮೂಲಕ ಯಾರಿಗೆ ಸಂದೇಶ ರವಾನಿಸಬೇಕೋ ಅವರಿಗೆ ತಲುಪಿಸಿ ಭಾವನಾತ್ಮಕತೆಗೇ ಬ್ರಾಂಡ್ ಆಗಿದ್ದರು.
ಪುಟ್ಟಣ್ಣ ಕಣಗಾಲರು ತೀರಿಹೋದಾಗ ಪಿ. ಲಂಕೇಶರು, ‘ಪುಟ್ಟಣ್ಣ, ಕಲ್ಪನಾ ಮುಂತಾದ ಕಲಾವಿದರು ಒಂದು ರೀತಿಯಲ್ಲಿ ಮರ್ಲಿನ್ ಮನ್ರೋ, ಮೀನಾಕುಮಾರಿಗಳು; ಅವರೇ ಸೃಷ್ಟಿಸಿಕೊಂಡ ಕಲಾಲೋಕದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಸಾವನ್ನು ಜೊತೆಗೇ ಕರೆದುಕೊಂಡು ಓಡಾಡುವ ಕೀಟ್ಸ್, ಶೆಲ್ಲಿ, ಬೋದಿಲೇರ್ ಗಳು.’ ಎಂದಿದ್ದರು.
ಇಂತಹ ಅಪರೂಪದ ವ್ಯಕ್ತಿತ್ವಗಳನ್ನು ಆಗಾಗ್ಗೆ ನೆನೆಯುವುದು, ನೆನೆಯುತ್ತಲೇ ಅವರ ಶಕ್ತಿ ಮತ್ತು ದೌರ್ಬಲ್ಯಗಳನ್ನು ಆರೋಗ್ಯಕರ ಚರ್ಚೆಯ ಮೂಲಕ ತೂಗಿ ನೋಡುವುದು ಮುಂದಿನ ಪೀಳಿಗೆಗೆ ಉಪಯುಕ್ತವಾಗಬಹುದಲ್ಲವೆ?
ಪುಟ್ಟಣ್ಣ

Thursday, April 30, 2015

ಕಾಯಕದಲ್ಲಿ ಕೈಲಾಸ ಕಂಡ ರಾಮಣ್ಣ




ಬಿರು ಬಿಸಿಲು. ಬೈಕ್ಪಂಕ್ಚರ್ಆಗಿತ್ತು. ಒಂದೂವರೆ ಕ್ವಿಂಟಾಲಿನ ಬೈಕನ್ನು ಅರ್ಧ ಕಿಲೋಮೀಟರ್ದೂರ ದೂಡಿಕೊಂಡು ಪಂಕ್ಚರ್ಅಂಗಡಿಯ ಬಳಿ ಹೋಗುವಷ್ಟರಲ್ಲಿ ದೇಹ ಧರೆಗಿಳಿದುಹೋಗಿತ್ತು. ಬೆವರಿಗೆ ಬಟ್ಟೆ ಒದ್ದೆಯಾಗಿತ್ತು. ಕಣ್ಣು ಮಂಜಾಗಿತ್ತು. ಸೆಕೆ ಸಹನೆ ಕೆಡಿಸಿತ್ತು. 
ಆದರೂ ಹೆಣಭಾರದ ಬೈಕನ್ನು ದೂಡಿಕೊಂಡು ಪಂಕ್ಚರ್ಅಂಗಡಿ ಮುಂದೆ ನಿಂತೆ. ಬಂದು ನಿಂತವನನ್ನು ಕಿರುಗಣ್ಣಿನಿಂದ ನೋಡಿದ, ತೂತಾದ ಟ್ಯೂಬ್ಗೆ ತೇಪೆ ಹಾಕುವ ಕಾಯಕದಲ್ಲಿ ಕಳೆದುಹೋಗಿದ್ದ ರಾಮಣ್ಣ, ‘ಬನ್ನಿ ಬನ್ನಿಎಂದರು. ನನ್ನ ಸ್ಥಿತಿಯನ್ನೊಮ್ಮೆ ಧ್ಯಾನಿಸಿದಂತೆ ನೋಡಿ ಮುಸಿ ಮುಸಿ ನಗುತ್ತ, ‘ಬಿಸ್ಲು ಹೆಂಗೈತೆಎಂದರು
ಮಾತಿನಲ್ಲಿ ಕಿಚಾಯಿಸುವ ವ್ಯಂಗ್ಯವಿತ್ತು. ಅವರಿಗೆ ಆಟ ನನಗೆ ಸಂಕಟ. ಸುಮ್ಮನಾದೆ. ಸುಮ್ಮನಾಗಿದ್ದು ಕಂಡು, ‘ನಿಮಗೊಂದು ಮಾತು ಹೇಳ್ತೀನಿ, ತಪ್ಪುತಿಳಿಬೇಡಿ. ಬಿಸ್ಲೈತ್ತಲ್ಲ, ಇದಕ್ಕೆ ಮೈ ಕೊಡಬೇಕು. ಸುಡು ಅನ್ನಬೇಕು. ಭಂಡರಾಗಬೇಕು. ಓಡೋಯ್ತದೆ. ಮಳೆ ಗಾಳಿ ಬಿಸಿಲು ಹ್ಯಂಗ್ಬತ್ತವೆ ಹಂಗ್ತಗಬೇಕು, ಅವುಗಳ ಜೊತೆಗೇ ಬದುಕಬೇಕು, ಏನಂತಿರಾಎಂದರು.
ಅಲ್ಲಿಯವರೆಗೆ ಅವರ ಬಗ್ಗೆ ಅಸಡ್ಡೆಯಿಂದ ನಿಂತಿದ್ದವನಿಗೆ ಅವರ ಮಳೆ ಗಾಳಿ ಬಿಸಿಲು ಹೇಗೆ ಬರುತ್ತವೋ ಹಾಗೆಯೇ ತಗೋಬೇಕು ಎಂದಿದ್ದು ಮಿಂಚು ಹೊಡೆದಂತಾಯಿತು. ಯು.ಆರ್‌. ಅನಂತಮೂರ್ತಿಯವರು ಇತ್ತೀಚಿಗೆ ಬರೆದ, ‘ಪ್ರಕೃತಿಯನ್ನು ಕೆಣಕದೆ ಹೊಂದಿಕೊಂಡು ಬದುಕುವ ವಿನಯ ನಮ್ಮ ಪಿತೃಗಳಿಗೆ ಇತ್ತು. ಇವತ್ತು ಜಾಗತೀಕರಣದ ಸುಳಿಗೆ ಸಿಕ್ಕಿ ಎಲ್ಲೆಲ್ಲೂ ಸೆಕೆಯಾಗದ, ಚಳಿಯೂ ಇಲ್ಲದ ನಿಯಂತ್ರಿತ ಹವಾಕ್ಕೆ ಒಗ್ಗಿಕೊಂಡಿದ್ದೇವೆ, ವಿಶ್ವಸಂಚಾರಿಗಳಾಗಿ ತಾವು ಎಲ್ಲಿ ಯಾವ ಕಾಲದಲ್ಲಿ ಇದ್ದೇವೆಂಬುದನ್ನು ತಿಳಿಯದಂತಾಗಿದ್ದೇವೆಎನ್ನುವುದು ನೆನಪಾಯಿತು.
ಟ್ಯೂಬಿನ ತೂತು ಮುಚ್ಚಿ ಗಾಳಿ ಹಾಕುವ ರಾಮಣ್ಣ ಸಂತನಂತೆ ಕಾಣತೊಡಗಿದರು. ಕಾಯಕ ಜೀವಿಯ ಜೀವನಾನುಭವ ಅನಂತಮೂರ್ತಿಯವರ ಓದು ವಿದ್ವತ್ತಿಗಿಂತ ಮಿಗಿಲಾದುದು ಎನ್ನಿಸತೊಡಗಿತು.
ಇಂತಹ ರಾಮಣ್ಣ ಹುಟ್ಟಿದ್ದು ಬೆಳಗಾವಿಯಲ್ಲಿ, ಬೆಳೆದದ್ದು ಗದಗಿನಲ್ಲಿ. ಅಪ್ಪನಿಗೆ ರೈಲ್ವೆಯಲ್ಲಿ ಕೆಲಸ. ಅಮ್ಮನಿಗೆ ಮನೆ ಕೆಲಸ. ಮನೆ ತುಂಬ ಮಕ್ಕಳು. ಯಾವ ಮಗು ಏನು ಓದುತ್ತಿದೆ, ಏನು ಮಾಡುತ್ತಿದೆ ಎಂದು ತಿಳಿಯಲು ಪೋಷಕರಿಗೆ ಪುರುಸೊತ್ತಿಲ್ಲ. ಇದು ಬಾಲಕ ರಾಮಣ್ಣನಿಗೆ ಅನುಕೂಲವಾಯಿತು. ಸ್ಕೂಲಿಗೆ ಹೋಗುವ ವಯಸ್ಸಿನಲ್ಲಿಯೇ ರಾಮಣ್ಣ ಸಿನಿಮಾ ಹುಚ್ಚಿಗೆ ಬಿದ್ದು, ವಿಷ್ಣುವರ್ಧನ್ಅಭಿಮಾನಿಯಾದರು. ವಿಷ್ಣು ಕಾಣಬೇಕೆಂಬ ಬಯಕೆಯಿಂದ ಬೆಂಗಳೂರಿಗೆ ಬಂದೇ ಬಿಟ್ಟರು.
ಬೆಂಗಳೂರಿಗೇನೋ ಬಂದಾಯಿತು. ಮಾಡಲು ಕೆಲಸವಿಲ್ಲ, ತಮ್ಮವರೆಂಬ ಜನವೂ ಇಲ್ಲ. ಅಲ್ಲಿ ಇಲ್ಲಿ ನೋಡಿ, ಕಾಲ ಕಳೆದು ಹೊಟ್ಟೆ ಚುರುಗುಡತೊಡಗಿದಾಗ, ಅಂತಿಮ ಆಯ್ಕೆಯಾದ ಹೋಟೆಲ್ ಕ್ಲೀನರ್ಆದರು. ಹೊಟ್ಟೆ ತುಂಬಿತು. ತಟ್ಟೆ ಲೋಟ ತೊಳೆಯುತ್ತಲೇ ಬೆಂಗಳೂರಿನ ಆಳ ಅಗಲಗಳನ್ನು ಅರಿಯುತ್ತಾ ಹೋದರು. ಚಿತ್ರನಟರು, ಚಿತ್ರೀಕರಣ ನಡೆಯುವ ತಾಣಗಳನ್ನು ಅವರಿವರಿಂದ ತಿಳಿದುಕೊಂಡರು.
ಇದ್ದಕ್ಕಿದ್ದಂತೆ ಒಂದು ದಿನ, ಚಿತ್ರೀಕರಣ ನಡೆಯುವ ಜಾಗ ಹುಡುಕಿ ಹೋಗಿ ವಿಷ್ಣು ಮುಂದೆ ನಿಂತು, ನಿಮ್ಮ ಅಭಿಮಾನಿ ಎಂದರು. ಹುಡುಗನ ಅಭಿಮಾನ ಕಂಡ ವಿಷ್ಣು, ಬಳಿಗೆ ಕರೆದು ಕೂರಿಸಿಕೊಂಡು, ಹಿನ್ನೆಲೆ ಕೇಳಿದರು. ‘ಮನೆಗೆ ಹಿರಿಯ ಮಗ ಅಂತೀಯಾ, ಮನೆ ಬಿಟ್ಟು ಬಂದರೆ ಅಲ್ಲಿ ಏನಾಗಿದೆ ಎಂಬ ಅರಿವಿದೆಯಾ, ಕೈ ಕೆಲಸ ಕಲಿ, ಮನೆಯವರಿಗೆ ನೆರವಾಗು, ಬದುಕು ರೂಪಿಸಿಕೊ. ಹೊಟ್ಟೆ ತುಂಬಿದ ಮೇಲೆ ನಾವೆಲ್ಲ ಇದ್ದೇ ಇರುತ್ತೇವೆಎಂದರು. ಆಗ ರಾಮಣ್ಣನಿಗೆ ಜ್ಞಾನೋದಯವಾಯಿತು.
ಅಂದೇ ಹೋಟೆಲ್ ಕೆಲಸ ಬಿಟ್ಟು ಕಲಾಸಿಪಾಳ್ಯಂನ ಹಳೆ ಟೈರುಗಳನ್ನು ಮಾರುವ ಪಂಕ್ಚರ್ಹಾಕುವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಹುಡುಗನ ಕೆಲಸದ ಬಗೆಗಿನ ಶ್ರದ್ಧೆ, ಅತಿಉತ್ಸಾಹ ಕಂಡ ಮುಸ್ಲಿಂ ಮಾಲಕರು, ತಾವು ಕಲಿತದ್ದನ್ನೆಲ್ಲ ಹೇಳಿಕೊಟ್ಟರು. ‘ನಾನು ಅವರಿಂದ ಕಲಿತದ್ದು ಅಪಾರ. ಜೀವನ ಅಂದರೆ ಏನು ಎನ್ನುವುದು ಅವರ ಒಡನಾಟದಲ್ಲಿ ಕರುಳಿಗೆ ಇಳಿಯಿತು. ಅವರಷ್ಟು ಶ್ರಮಜೀವಿಗಳು ಜಗತ್ತಿನಲ್ಲೇ ಇಲ್ಲವೇನೋ ಎನ್ನುವಷ್ಟು, ಮಳೆ ಚಳಿ ಗಾಳಿ ನೋಡದೆ ಕೆಲಸದಲ್ಲಿ ಮುಳುಗೇಳುತ್ತಿದ್ದರು. ಅವರೇ ನನ್ನ ಇವತ್ತಿನ ಕೆಲಸಕ್ಕೆ ಸ್ಫೂರ್ತಿಎನ್ನುವ ರಾಮಣ್ಣ ಕಳೆದ ನಲವತ್ತು ವರ್ಷಗಳಿಂದ ಧಣಿವಿಗೇ ಧಣಿವಾಗುವಂತೆ ಕೆಲಸ ಮಾಡುತ್ತಲೇ ಇದ್ದಾರೆ.
ನಾನು ಕತ್ತರಿಗುಪ್ಪೆ ಏರಿಯಾಕ್ಕೆ ಬಂದಾಗ, ಇಲ್ಲಿ ಏನೂ ಇರಲಿಲ್ಲ. ನನ್ನ ಹತ್ರಾನೂ ಏನೂ ಇರಲಿಲ್ಲ. ಇದ್ದ ಗೋಣಿಚೀಲ ಬಿಚ್ಚಿ ಅದರ ಮೇಲೆ ಒಂದು ಸ್ಪ್ಯಾನರ್‌, ಕಟಿಂಗ್ಪ್ಲೇಯರ್ರು, ಸ್ಕ್ರೂ ಡ್ರೈವರ್ಹಾಕಿ ಪಕ್ಕದ ಹುಲ್ಲು ಹಾಸಿನ ಮೇಲೆ ಕೂತೆ. ಅವತ್ತು ನನ್ನ ಬಳಿ ಕಲಾಸಿಪಾಳ್ಯದ ಗುರು ಕಲಿಸಿದ ಕೆಲಸ ಬಿಟ್ರೆ ಇನ್ನೇನೂ ಇರಲಿಲ್ಲ. ಇವತ್ತು ಕತ್ತರಿಗುಪ್ಪೆ ಮೇನ್ರೋಡಿನಲ್ಲಿ ಭವಾನಿ ಸೈಕಲ್ ಮಾರ್ಟ್ಎಂಬ ಅಂಗಡಿ ಇದೆ. ಚನ್ನಸಂದ್ರದಲ್ಲಿ ಮನೆ ಕಟ್ಟಿಸಿದ್ದೀನಿ. ಮಗ ಬಿಕಾಂ ಓದಿ, ಕೆಲಸಕ್ಕೆ ಹೋಗ್ತಿದಾನೆ. ಮಗಳ ಮದುವೆ ಮಾಡಿದ್ದೇನೆ. ಅವತ್ತು ಬೆಂಗಳೂರಿಗೆ ಬಂದಾಗ ಮಗನನ್ನು ಹುಡುಕದೆ ಬಿಟ್ಟ ಅಪ್ಪಅಮ್ಮ ಬಂಧು ಬಾಂಧವರೆಲ್ಲ ಈಗ ನನ್ನ ಹುಡುಕಿಕೊಂಡು ನಾನಿರುವಲ್ಲಿಗೇ ಬಂದಿದ್ದಾರೆ. ಅವರಿಗೂ ಒಂದೊಂದು ದಾರಿ ತೋರಿಸಿದ್ದೇನೆ. ಎಲ್ಲ ಕೆಲಸದಿಂದಲೇ. ಕೆಲಸ ಮಾಡಬೇಕು ಸಾರ್‌, ಯಾವನು ಸೋಮಾರಿಯಾಗ್ತನೋ ಅವನು ಹಾಳಾಗ್ತನೆ, ಹಾಳಾಗದಷ್ಟೇ ಅಲ್ಲ ನರಕ ನೋಡ್ತನೆಎಂದರು. 
ಬೀದಿಯಲ್ಲಿ ಬಿಸಿಲಲ್ಲಿ ಕೂತಿದ್ದರೂ, ಮುಖದ ಮೇಲೆ ಬೆವರು ಸುರಿಯುತ್ತಿದ್ದರೂ ರಾಮಣ್ಣ ಮಾತ್ರ ಸದಾ ನಗುವ ಆಸಾಮಿ. ವಾಹನಗಳ ಟೈರ್ಬಿಚ್ಚುವ ಶ್ರಮದ ಕೆಲಸ ಮಾಡುತ್ತಿದ್ದರೂ ಸ್ವಲ್ಪವೂ ಸುಸ್ತಾಗದ, ಸಹನೆ ಕಳೆದುಕೊಳ್ಳದ ವ್ಯಕ್ತಿ. ಅಷ್ಟೇ ಅಲ್ಲ, ಬಂದ ಗಿರಾಕಿಗಳೊಂದಿಗೆ ಮಾತನಾಡುತ್ತಲೇ ಕೆಲಸ ಮಾಡಿ ಮುಗಿಸುವ ನಿಪುಣ ಕಸುಬುದಾರ. ಕೆಲಸವನ್ನು ಕೆಲಸ ಎಂದು ಭಾವಿಸದೆ, ಅದಕ್ಕಾಗಿ ನಾನು ನನಗಾಗಿ ಅದು ಎಂದು ಅರಿತು, ಅದರೊಂದಿಗೆ ಬೆರೆತವರು. 
ಕೆಂಪಗೆ ಕುಳ್ಳಗಿರುವ ರಾಮಣ್ಣನವರು ಕಳೆದ ನಲವತ್ತು ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ. ನಲವತ್ತು ವರ್ಷಗಳಲ್ಲಿ ಇವರನ್ನು ಟಿಪ್ಟಾಪ್ಡ್ರೆಸ್ಇರಲಿ, ಒಂದು ನೀಟಾದ ಶರ್ಟ್‌ ಪ್ಯಾಂಟಿನಲ್ಲೂ ಕಂಡವರಿಲ್ಲ. ಮನೆಯಿಂದ ಬರುವಾಗ ಮತ್ತು ಹೋಗುವಾಗಲಷ್ಟೇ ಶರ್ಟು-ಪ್ಯಾಂಟು ತೊಡುವ ರಾಮಣ್ಣರನ್ನು, ಸದಾ ಕೊಳಕಾದ ಬನಿಯನ್‌-ಪ್ಯಾಂಟ್ಬಿಟ್ಟು ಬೇರೊಂದು ಡ್ರೆಸ್ನಲ್ಲಿ ಯಾರೂ ನೋಡಿದ್ದಿಲ್ಲ.
ಮೊನ್ನೆ ಮನೆಯಿಂದ ಬರ್ತಾ ಐದು ಶರ್ಟ್ತಂದು ಗಾರೆ ಕೆಲಸದವರಿಗೆ ಕೊಟ್ಟೆ. ನಾನು ಹಾಕದಿಲ್ಲ, ಯಾರು ಹಾಕ್ತರೋ ಅವರಿಗೆ ಕೊಟ್ರೆ ಅವರಿಗೂ ಖುಷಿಯಾಗ್ತದೆ, ನಮಗೂ ನಿರಾಳ, ಏನಂತೀರಾ?’ ಎಂದರು.
ಇಂತಹ ರಾಮಣ್ಣರಿಗೆ ಈಗ 54 ವರ್ಷ. ತಮ್ಮ ಸರಳ, ಸಜ್ಜನಿಕೆಯಿಂದಾಗಿಯೇ ಕತ್ತರಿಗುಪ್ಪೆ ಜನರ ಅಚ್ಚುಮೆಚ್ಚಿನವರು. ಪುಟ್ಟ ಮಕ್ಕಳ ಸೈಕಲ್ಲಿಗೆ ಗಾಳಿ ತುಂಬಿಸುವ, ಸಣ್ಣಪುಟ್ಟ ರಿಪೇರಿ ಮಾಡುವ ಅಕ್ಕರೆಯ ಅಂಕಲ್. ಕೆಲಸ ಕೆಲಸ ಕೆಲಸ ಎಂದು ಸದಾ ಅದರಲ್ಲಿಯೇ ಅದ್ದಿಕೊಂಡಿರುವ ರಾಮಣ್ಣ, ಕೆಲಸದ ನಡುವೆ ಬಿಡುವು ಎಂದಾಗ ದಿನಪತ್ರಿಕೆ ಓದುತ್ತಾರೆ. ವಿಷ್ಣು ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ.
ಏನೋ ನೆನಪಾದವರಂತೆ, ‘ನೋಡಿ, ನಿಮಗೆ ಹೇಳೋದನ್ನೇ ಮರೆತಿದ್ದೆ, ನಾನು ವಿಷ್ಣು ಅಭಿಮಾನಿ, ಅವರನ್ನು ನೋಡಲು ಗದಗದಿಂದ ಬೆಂಗಳೂರಿಗೆ ಬಂದೆ. ಇವತ್ತು ನನ್ನ ಮನೆ ಇರುವ ಚನ್ನಸಂದ್ರದ ರಸ್ತೆಯಲ್ಲಿಯೇ ವಿಷ್ಣು ಸಮಾಧಿ ಇದೆ. ಅವತ್ತು ನಾನು ಅವರನ್ನು ಹುಡುಕಿಕೊಂಡು ಬಂದೆ, ಇವತ್ತು ಅವರು ನಾನಿರುವಲ್ಲಿಗೇ ಬಂದು ಮಲಗಿದ್ದಾರೆಎನ್ನುವ ರಾಮಣ್ಣರಿಗೆ ಮಾರ್ಕ್ಸ್ ಸಿದ್ಧಾಂತವಾಗಲಿ, ಕಮ್ಯುನಿಸ್ಟರ ಕ್ರಾಂತಿಯಾಗಲಿ, ಮೇ ಡೇಯ ಮಹತ್ವವಾಗಲಿ ಗೊತ್ತಿಲ್ಲ. ಮನುಷ್ಯನಾಗಿ ಹುಟ್ಟಿದ್ದೇನೆ ದುಡಿದು ತಿನ್ನಬೇಕು, ಕೈಲಾದದ್ದನ್ನು ನಾಲ್ಕು ಜನಕ್ಕೆ ಮಾಡಬೇಕು, ಮಣ್ಣಲ್ಲಿ ಮಣ್ಣಾಗಿ ಹೋಗಬೇಕು ಎಂಬ ತತ್ವಕ್ಕಂಟಿದ ಕಾಯಕಜೀವಿ ಅವರು.

Thursday, March 12, 2015

ಆ ದ್ಯಾವ್ರು ತಂದ ಆಸ್ತಿ- ಸಿದ್ದಲಿಂಗಯ್ಯ

ಸಿದ್ದಲಿಂಗಯ್ಯ
ಕನ್ನಡ ಚಿತ್ರರಂಗಕ್ಕೆ ಬಂಗಾರದಂತಹ ಚಿತ್ರಗಳನ್ನು ಕೊಟ್ಟ ಅಪ್ಪಟ ಕನ್ನಡದ ನಿರ್ದೇಶಕ ಸಿದ್ದಲಿಂಗಯ್ಯನವರು ಈಗ ನಮ್ಮೊಂದಿಗಿಲ್ಲ. ಆದರೆ ಅವರು ಸೃಷ್ಟಿಸಿದ ಹತ್ತಾರು ಪಾತ್ರಗಳು ನಮ್ಮೊಳಗೇ ಇವೆ. ಅವರು ರಚಿಸಿದ ನೂರಾರು ಸಂಭಾಷಣೆಗಳು ನಮ್ಮ ಕಿವಿಗಳಲ್ಲಿ ಗುಂಯ್‌ಗುಡುತ್ತಿವೆ. ಸಾಮಾಜಿಕ ಕಳಕಳಿಯ, ಸದಭಿರುಚಿಯ, ಸಂದೇಶ ಸಾರುವ ಸಾರ್ವಕಾಲಿಕ ಚಿತ್ರಗಳನ್ನು ಕೊಟ್ಟ ಸಿದ್ದಲಿಂಗಯ್ಯನವರು ಕನ್ನಡ ಚಿತ್ರರಸಿಕರ ಸ್ಮೃತಿಪಟಲದಿಂದ ದೂರವಾಗಲು ಸಾಧ್ಯವೇ ಇಲ್ಲ.
ತುಮಕೂರು ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ 1936 ರಲ್ಲಿ ಹುಟ್ಟಿದ ಸಿದ್ದಲಿಂಗಯ್ಯನವರು, ಕಡು ಕಷ್ಟದ ಬಡತನದಲ್ಲಿ ಬೆಳೆದವರು. ಸ್ವಾಭಿಮಾನದ ಸಂಕೋಚದ ಮುದ್ದೆಯಂತಿದ್ದ ಸಿದ್ದಲಿಂಗಯ್ಯನವರು ಹಳ್ಳಿಜನರ ಮಾದರಿಯಂತಿದ್ದರು. ನಡೆ ನುಡಿಯಲ್ಲಿ ಸರಳ ಸಜ್ಜನಿಕೆ ಎದ್ದು ಕಾಣುತ್ತಿತ್ತು. ಚಿಕ್ಕವರು ದೊಡ್ಡವರು ಎಂಬ ಭೇದಭಾವ ಅವರಲ್ಲಿರಲಿಲ್ಲ. ಬಂಗಾರದ ಮನುಷ್ಯನಂತಹ ಮಹೋನ್ನತ ಚಿತ್ರ ಕೊಟ್ಟರೂ, ಆ ಚಿತ್ರದಿಂದ ನಿರ್ಮಾಪಕರು ಅಪಾರ ಹಣ ಗಳಿಸಿದರೂ, ನಟರು ಸ್ಟಾರ್ ಗಳಾಗಿ ಮೆರೆದರೂ ಸಿದ್ದಲಿಂಗಯ್ಯನವರು ಮಾತ್ರ ತೊರೆಯಂತೆ ತಣ್ಣಗಿದ್ದವರು. ಹಳ್ಳಿಹೈದ ಮುತ್ತಣ್ಣನನ್ನು ಮಹಾನಗರದ ಮೇಯರ್‌ ನನ್ನಾಗಿ ರೂಪಿಸಿದರೂ, ಸಿದ್ದಲಿಂಗಯ್ಯನವರು ಮಾತ್ರ  ಕೊನೆಯವರೆಗೂ ಹಳ್ಳಿಮುಕ್ಕನಂತೆಯೇ ಇದ್ದವರು.
70 ರ ದಶಕ, ಹಳ್ಳಿಯ ಯುವಕರು ವಿದ್ಯಾವಂತರಾಗಿ ಸರಕಾರಿ ನೌಕರಿ ಹಿಡಿಯುತ್ತಿದ್ದ ಕಾಲ. ಕೃಷಿ ಕಡೆಗಣಿಸಲ್ಪಡುತ್ತಿದ್ದ ಕಾಲ.  ಆ ಕಾಲಘಟ್ಟದಲ್ಲಿ ಸಿದ್ದಲಿಂಗಯ್ಯನವರು, ವಿದ್ಯಾವಂತ ಯುವಕನೊಬ್ಬ ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಹಳ್ಳಿಯ ಕೃಷಿ ಬದುಕಿಗಿಳಿಯುವ ಕತೆಯನ್ನುಳ್ಳ 'ಬಂಗಾರದ ಮನುಷ್ಯ' ಚಿತ್ರವನ್ನು ತೆರೆಗೆ ತಂದರು. ಆ ಚಿತ್ರದಲ್ಲಿ ಒಗ್ಗೂಡಿ ಬದುಕುವ, ಆತ್ಮವಿಶ್ವಾಸದಿಂದ ಪುಟಿದೇಳುವ ಗ್ರಾಮೀಣ ಬದುಕಿನ ಅನಾವರಣವಿತ್ತು. ಗಾಂಧಿಯ ಕನಸು ಮತ್ತು ಆದರ್ಶ ಆ ಕತೆಯಲ್ಲಿ ಕಂಡೂ ಕಾಣದಂತೆ ಅಡಗಿತ್ತು. ಆಶ್ಚರ್ಯವೆಂದರೆ, ಸಿದ್ದಲಿಂಗಯ್ಯನವರಿಗೇ ಗೊತ್ತಿರಲಿಲ್ಲ, ಆ ಚಿತ್ರ ಆ ಮಟ್ಟದ ಯಶಸ್ಸು ಗಳಿಸುತ್ತದೆಂದು. ಕುತೂಹಲಕರ ಸಂಗತಿ ಎಂದರೆ, 'ಬಂಗಾರದ ಮನುಷ್ಯ' ಚಿತ್ರ ನೋಡಿ ನಾಡಿನ ಹಲವಾರು ವಿದ್ಯಾವಂತ ಯುವಕರು ಹಳ್ಳಿಯತ್ತ ಹೆಜ್ಜೆ ಹಾಕಿದರು. ಕೃಷಿಯಲ್ಲಿ ತೊಡಗಿಕೊಂಡು ಯಶಸ್ವಿಯಾದರು. ಬದಲಾವಣೆಗೆ, ಸಾಮಾಜಿಕ ಕ್ರಾಂತಿಗೆ ಕಾರಣವಾದ ಚಿತ್ರವದು.
ಎರಡು ವರ್ಷಗಳ ಹಿಂದೆ 'ಬಂಗಾರದ ಮನುಷ್ಯ' ಚಿತ್ರದಿಂದ ಪ್ರಭಾವಿತರಾಗಿ ಯಶಸ್ವಿ ಕೃಷಿಕರಾದವರ ಬಗ್ಗೆ ವಿಚಾರಿಸಲು, ಆ ಬಗ್ಗೆ ಲೇಖನ ಸಿದ್ಧಪಡಿಸಲು ಸಿದ್ದಲಿಂಗಯ್ಯನವರನ್ನು ಭೇಟಿ ಮಾಡಿದ್ದೆ. ಆ ಸಮಯದಲ್ಲಿ ನನ್ನೊಂದಿಗಿದ್ದ ಗೆಳೆಯ ರಮೇಶ್‌ ಹುಣಸೂರು, ಸಿದ್ದಲಿಂಗಯ್ಯನವರ ಸರಳ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರ ಕಾಲು ಮುಟ್ಟಿ ನಮಸ್ಕರಿಸಲು ಬಗ್ಗಿದರು. ಆ ತಕ್ಷಣವೇ ಹಿಂದೆ ಸರಿದ ಸಿದ್ದಲಿಂಗಯ್ಯನವರು, 'ಯಾರು ಯಾರಿಗೂ ತಲೆ ಬಾಗಬಾರದು' ಎಂದರು. ಆ ಮಾತು ಖಡಕ್ಕಾಗಿತ್ತು. ಸ್ವಾಭಿಮಾನದ ಪಾಠ ಹೇಳುತ್ತಿತ್ತು. ಅವರ ಬದುಕನ್ನು ಬಿಂಬಿಸುತ್ತಿತ್ತು. ಆ ನಂತರ ಸಮಾಧಾನದಿಂದ, ನಿಮ್ಮ ಮಾತಿನಲ್ಲಿ ವಿನಯವಿರಲಿ. ಯಾರೂ ಹೆಚ್ಚಲ್ಲ ಇಲ್ಲಿ. ಎಲ್ಲರಿಂದಲೂ ಕಲಿಯುವುದಿದೆ ಎಂದು ತತ್ವಜ್ಞಾನಿಯಂತೆ ಮಾತಾಡಿ, ಆತ್ಮೀಯರಾದರು.
ಬಂಗಾರದ ಮನುಷ್ಯ ಚಿತ್ರದತ್ತ ವಿಷಯಾಂತರಿಸಿದಾಗ 70 ರ ದಶಕಕ್ಕೆ ಜಾರಿದರು. ಆ ಚಿತ್ರ ಓಡಿದ್ದು, ಹಣ ಗಳಿಸಿದ್ದು, ಹೆಸರು ತಂದಿದ್ದು ಎಲ್ಲವನ್ನೂ ವಿಸ್ತೃತವಾಗಿ ಹಂಚಿಕೊಂಡರು. ಕೋಲಾರ ಮತ್ತು ಶಿವಮೊಗ್ಗದಲ್ಲಿ ಚಿತ್ರ ನೋಡಿ ಪ್ರಭಾವಿತರಾದ ವಿದ್ಯಾವಂತ ಯುವಕರು ಯಶಸ್ವಿ ಕೃಷಿಕರಾದ ಕತೆಯನ್ನು ಬಾಯ್ತುಂಬ ಬಣ್ಣಿಸಿದರು. ಅದು ನನ್ನಿಂದ ಆದದ್ದಲ್ಲ, ಕನ್ನಡ ನಾಡಿನ ಜನ ಮಾಡಿಸಿದ್ದು ಎಂದರು. ಅವರ ಮಾತಿನುದ್ದಕ್ಕೂ ಸರಳ ಸಜ್ಜನಿಕೆ ಎದ್ದು ಕಾಣುತ್ತಿತ್ತು. ಅಬ್ಬರ, ಸದ್ದು, ನಖರ, ಅನಗತ್ಯ ಅಹಂ ಸುಳಿಯಲಿಲ್ಲ.
ಬಡತನದ ಬೇಗೆಯಿಂದ ಬಿಡಿಸಿಕೊಳ್ಳಲು ಹಳ್ಳಿಯಿಂದ ಓಡಿಹೋದ ಸಿದ್ದಲಿಂಗಯ್ಯ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್‌ ಬಾಯ್‌ ಆಗಿ ಕೆಲಸಕ್ಕೆ ಸೇರಿದರು. ಆ ನಂತರ ಮದ್ರಾಸಿಗೆ ಹೋಗಿ ವಿಠಲಾಚಾರ್ಯರ ಶಿಷ್ಯರಾದರು. ಊಟ-ವಸತಿಗೆ ಸ್ಟುಡಿಯೋಗಳನ್ನೇ ಆಶ್ರಯಿಸಿದರು. ಬೆಳ್ಳಿತೆರೆಯ ಬೆರಗಿನ ಲೋಕವನ್ನು ಬಹಳ ಹತ್ತಿರದಿಂದ ಬೆರಗುಗಣ್ಣಿನಿಂದ ನೋಡುತ್ತಾ, ಕರುಳಿಗೆ ಇಳಿಸಿಕೊಳ್ಳುತ್ತಾ ಹಂತ ಹಂತವಾಗಿ ಬೆಳೆದರು. ಸಹನಿರ್ದೇಶಕರಾಗಿ, ಚಿತ್ರಕಥೆ-ಸಂಭಾಷಣೆಕಾರರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದರು. ಇವರ ಬಂಗಾರದಂತಹ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದವು. ಹಾಗೆಯೇ ನಿರ್ದೇಶನ ಕಲಿಯುವ ಯುವ ಪೀಳಿಗೆಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟವು.
1969 ರಲ್ಲಿ ತೆರೆ ಕಂಡ ಮೇಯರ್‌ ಮುತ್ತಣ್ಣ ಸಿದ್ದಲಿಂಗಯ್ಯನವರ ಮೊದಲ ನಿರ್ದೇಶನದ ಚಿತ್ರ. ಆ ನಂತರ ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು, ಬಂಗಾರದ ಮನುಷ್ಯ, ದೂರದ ಬೆಟ್ಟ, ಬೂತಯ್ಯನ ಮಗ ಅಯ್ಯು, ಹೇಮಾವತಿ, ಭೂಲೋಕದಲ್ಲಿ ಯಮರಾಜ, ಕೂಡಿ ಬಾಳಿದರೆ ಸ್ವರ್ಗ ಸುಖ, ಬಾರೆ ನನ್ನ ಮುದ್ದಿನ ರಾಣಿ, ಪ್ರೇಮ ಪರ್ವ, ಪರಾಜಿತ, ಅಜೇಯ ಸೇರಿದಂತೆ 23 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಕೌಟುಂಬಿಕ, ಸಾಮಾಜಿಕ, ಹಾಸ್ಯ, ದುರಂತ, ಪತ್ತೇದಾರಿ, ಪ್ರೀತಿ-ಪ್ರೇಮ ಮುಂತಾದ ವಿಭಿನ್ನ ಬಗೆಯ ಚಿತ್ರಗಳಿವೆ. ಆದರೂ ಸಿದ್ದಲಿಂಗಯ್ಯನವರು ನಿಲ್ಲುವುದು, ನೆನಪಿನಲ್ಲುಳಿಯುವುದು ಗ್ರಾಮೀಣ ಬದುಕನ್ನು ಬಗೆದಿಟ್ಟ ಬಗೆಯಲ್ಲಿ. ಆ ಬದುಕನ್ನು ಬೆಳ್ಳಿತೆರೆಗೆ ತಂದ ರೀತಿಯಲ್ಲಿ.
ಹಾಗೆ ನೋಡಿದರೆ, ಇವರ ವಾರಗೆಯವರಾದ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ಚಿತ್ರಗಳು ಒಂದು ಮಾದರಿಯಾದರೆ, ಸಿದ್ದಲಿಂಗಯ್ಯನವರದು ಇನ್ನೊಂದು ಮಾದರಿ. ಇಬ್ಬರ ಚಿತ್ರಗಳೂ ಕನ್ನಡ ಚಿತ್ರರಂಗವನ್ನು ಪೊರೆದಿವೆ, ಪೋಷಿಸಿವೆ, ಪೊಗದಸ್ತಾಗಿ ಬೆಳೆಯಲು ಸಹಕರಿಸಿವೆ. ದುರದೃಷ್ಟಕರ ಸಂಗತಿ ಎಂದರೆ ಪುಟ್ಟಣ್ಣರಿಗೆ ಸಿಕ್ಕ ಮಣೆ, ಮನ್ನಣೆ ಸಿದ್ದಲಿಂಗಯ್ಯನವರಿಗೆ ಸಿಗಲಿಲ್ಲ. ಪ್ರಚಾರ, ಪ್ರಶಸ್ತಿ, ಪುರಸಾರಗಳೂ ಹುಡುಕಿಕೊಂಡು ಬರಲಿಲ್ಲ. ಈ ಬಗ್ಗೆ ಸಿದ್ದಲಿಂಗಯ್ಯನವರಿಗೆ ಕೊರಗಿದ್ದರೂ, ನಾನು ಪಡೆದುಕೊಂಡು ಬಂದದ್ದು ಇಷ್ಟೆ ಅಂತ ಕಾಣುತ್ತೆ ಎಂದು ಸಂತನಂತೆ ಸುಮ್ಮನಾಗಿಬಿಡುತ್ತಿದ್ದರು. ಇದು ಅವರ ದೊಡ್ಡ ಗುಣ.
ಇಂತಹ ಅಪರೂಪದ ಚಿತ್ರಜೀವಿಯನ್ನು ಕನ್ನಡ ಚಿತ್ರರಂಗ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಆರೋಪವಿತ್ತು. ಇದರ ಜೊತೆಗೆ ತಮ್ಮ ಪುತ್ರ ಮುರಳಿಯವರ ಅಕಾಲಿಕ ಮರಣ ಅವರನ್ನು ಇನ್ನಷ್ಟು ಕುಗ್ಗಿಸಿತ್ತು.  ಮಧುಮೇಹ, ಕಿಡ್ನಿ ವೈಫಲ್ಯ ದೇಹವನ್ನು ದಣಿಸಿತ್ತು. ಯಾರಿಗೂ ತಲೆ ಬಾಗದ ಸಿದ್ದಲಿಂಗಯ್ಯನವರ ಸ್ವಾಭಿಮಾನಿ ಗುಣವೇ ಅದಕ್ಕೆಲ್ಲ ಅಡ್ಡಿಯಾಯಿತು ಎಂದರೂ, ಅವರ ಪ್ರತಿಭೆಗೆ, ಶ್ರದ್ಧೆಗೆ, ನಿಷ್ಠೆಗೆ ಸಲ್ಲಲೇಬೇಕಾದ ನ್ಯಾಯ ಸಲ್ಲಲಿಲ್ಲವೆಂಬ ಕೊರಗು ಹಾಗೆಯೇ ಉಳಿದಿದೆ.
ಆರೋಪ, ಕೊರಗುಗಳ ನಡುವೆಯೇ ಚಿತ್ರಜೀವಿ ರಂಗಸ್ವಾಮಿ ಹೇಳುವಂತೆ, 'ಬಂಗಾರದ ಮನುಷ್ಯ ಮತ್ತು ಬೂತಯ್ಯನ ಮಗ ಅಯ್ಯು ಚಿತ್ರಗಳು ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿದ್ದಂತೆ. ಆ ಎರಡು ಕಣ್ಣುಗಳನ್ನು ಕೊಟ್ಟ ಪುಣ್ಯಾತ್ಮನ ಆತ್ಮ ತಣ್ಣಗಿರಲಿ' ಎಂದಿರುವುದು ಅವರ ಮೇಲಿಟ್ಟಿರುವ ಪ್ರೀತಿಯನ್ನು, ಗೌರವವನ್ನು ಸಾರುತ್ತಿದೆ.
ಇಂತಹ ಸಿದ್ದಲಿಂಗಯ್ಯ ಆ ದ್ಯಾವ್ರು ತಂದ ಕನ್ನಡದ ಆಸ್ತಿ.


Friday, February 13, 2015

ಮೋದಿ ಸರಕಾರದಿಂದ ಭೂ ಕಾಯ್ದೆಗೆ ಸುಗ್ರೀವಾಜ್ಞೆ... ಈಗ ಪ್ರೊಫೆಸರ್ ಇರಬೇಕಾಗಿತ್ತು…!

ಕನ್ನಡನಾಡು ಕಂಡ ಪ್ರಖರ ಪ್ರಗತಿಪರ ಚಿಂತಕ, ರೈತ ನಾಯಕ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರು ಹುಟ್ಟಿದ್ದು ಫೆಬ್ರವರಿ 13, 1936 ರಂದು, ಇಹಲೋಕ ತ್ಯಜಿಸಿದ್ದು ಫೆಬ್ರವರಿ 3, 2004ರಲ್ಲಿ. ಕೇಂದ್ರದ ಮೋದಿ ನೇತೃತ್ವದ ಸರಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಗೆ ರಾಷ್ಟ್ರಾಧ್ಯಕ್ಷರ ಅಂಗೀಕಾರ ಪಡೆದಿದೆ. ರೈತರನ್ನು ಒಕ್ಕಲೆಬ್ಬಿಸುವ ಈ ಕರಾಳ ಕಾಯ್ದೆ ತರುತ್ತಿರುವ ಸಂದರ್ಭದಲ್ಲಿ ಪ್ರೊಫೆಸರ್ ಇದ್ದಿದ್ದರೆ…
ಕೇವಲ ಒಂಬತ್ತು ತಿಂಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ, ಆಡಳಿತದುದ್ದಕ್ಕೂ ಸುಗ್ರೀವಾಜ್ಞೆಗಳಲ್ಲೇ ಸುದ್ದಿಯಾಯಿತು. ಅದರಲ್ಲೂ ಅತ್ಯಂತ ಮುಖ್ಯವಾದದ್ದು, ಯುಪಿಎ ಸರಕಾರ 2013ರಲ್ಲಿ ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ಹೊರಡಿಸಿರುವ ಸುಗ್ರೀವಾಜ್ಞೆ. ಇದಕ್ಕೆ ಡಿಸೆಂಬರ್ 31ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕಾರ ನೀಡಿದ್ದಾರೆ.
ಅಸಲಿಗೆ ಈ ಕಾಯ್ದೆ ಜಾರಿಗೆ ತರಲು ಯುಪಿಎ ಸರಕಾರ ಸುಮಾರು 7 ವರ್ಷಗಳ ಕಾಲ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚಿಸಿತ್ತು. ಕಾಯ್ದೆಯನ್ನು 2007 ಮತ್ತು 2009 ರಲ್ಲಿ ಎರಡು ಸಂಸದೀಯ ಸಮಿತಿಗಳಿಂದ ಪರಿಶೀಲಿಸಿ, ಸರ್ವಾನುಮತದಿಂದ ಜಾರಿಗೆ ತಂದಿತ್ತು. ಕುತೂಹಲಕರ ಸಂಗತಿ ಎಂದರೆ, ಇವೆರಡೂ ಸಮಿತಿಗಳಿಗೆ ಬಿಜೆಪಿಯ ಹಿರಿಯ ಮುಖಂಡರಾದ ಕಲ್ಯಾಣ್ ಸಿಂಗ್ ಮತ್ತು ಸುಮಿತ್ರಾ ಮಹಾಜನ್ ರನ್ನೇ ಅಧ್ಯಕ್ಷರನ್ನಾಗಿಸಿತ್ತು. ಇದರಲ್ಲಿ ಹಾಲಿ ಮೋದಿ ಸರಕಾರದಲ್ಲಿ ಹಿರಿಯ ಸಚಿವರಾಗಿರುವ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಮಂಡಿಸಿದ್ದ ತಿದ್ದುಪಡಿಗಳನ್ನೂ ಅಳವಡಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ಎಲ್ಲ ಪಕ್ಷಗಳಿಗೂ ಈ ಕಾಯ್ದೆ ಒಪ್ಪಿತವಾಗಿತ್ತು.  
ಆದರೆ ನರೇಂದ್ರ ಮೋದಿ ಸರಕಾರ, ಸುಧಾರಣೆಯ ನೆಪವೊಡ್ಡಿ ಈ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯ ಮೂಲಕ ಕಾರ್ಯರೂಪಕ್ಕೆ ಮುಂದಾಗಿದೆ. ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಅತ್ಯಂತ ಮಹತ್ವದ ವಿಚಾರವಾಗಿದ್ದು ಬಗ್ಗೆ ಚುನಾಯಿತ ಜನಪ್ರತಿನಿಧಿಗಳಿಂದ ಕೂಡಿದ ಲೋಕಸಭೆ ಮತ್ತು ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರತಿಭಾವಂತರಿರುವ ರಾಜ್ಯಸಭೆಗಳಲ್ಲಿ ವಿವರವಾಗಿ ಚರ್ಚೆ ನಡೆಯಬೇಕಾಗಿತ್ತು. ಅದು ಪ್ರಜಾಪ್ರಭುತ್ವದ ರೀತಿ ನೀತಿಯಾಗಿತ್ತು. ಆದರೆ ಸಂಸತ್ತಿಗೂ ಬರದೆ, ಚರ್ಚೆಯೂ ಆಗದೆ ಈ ಸುಗ್ರೀವಾಜ್ಞೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.  
ಅಷ್ಟಕ್ಕೂ ಈ ಕಾಯ್ದೆಯಲ್ಲಿ ಏನಿದೆ ಎಂದು ನೋಡುವುದಾದರೆ, ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 5 ವರ್ಷಗಳೊಳಗೆ ಕೈಗಾರಿಕೆಯನ್ನು ಸ್ಥಾಪಿಸದಿದ್ದರೆ ಭೂಮಿ ಮತ್ತೆ ಮೂಲ ಮಾಲಕನಿಗೆ ವಾಪಸ್ ನೀಡಬೇಕು ಎಂಬ ಅಂಶವನ್ನು ಮೋದಿ ಸರಕಾರ ಜಾರಿ ಮಾಡಿರುವ ಹೊಸ ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ ಕೈಬಿಟ್ಟಿದೆ. ಇದು ಕೃಷಿ ಕ್ಷೇತ್ರ ಮತ್ತು ರೈತ ಸಮುದಾಯಕ್ಕೆ ಮಾಡುವ ಮಹಾ ದ್ರೋಹ.
ಸಿಎಜಿ ವರದಿ ಪ್ರಕಾರ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿದ್ದ ಒಟ್ಟಾರೆ ಭೂಮಿಯ ಪೈಕಿ ಶೇ. 38ರಷ್ಟು ಭೂಮಿ ಹಲವು ವರ್ಷಗಳಿಂದ ಯಾವುದೇ ರೀತಿ ಬಳಕೆಯಾಗದೆ ಹಾಗೇ ಉಳಿದಿದೆ. ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ನೆಪದಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಅಡವಿಟ್ಟು, ಕೆಲವು ಕಂಪನಿಗಳು ನೂರಾರು ಕೋಟಿ ರೂ. ಸಾಲ ಪಡೆದಿವೆಯೆಂದೂ ವರದಿ ಹೇಳಿದೆ. ಇಂತಹ ಅಕ್ರಮಗಳನ್ನು ತಡೆಯುವ ಸಲುವಾಗಿಯೇ ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ ಹೊಸ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು.
ಆದರೆ ಮೋದಿ ಸರಕಾರ ಅದಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಈ ಹೊಸ ಕಾಯ್ದೆಯ ಅಧಿನಿಯಮದನ್ವಯ ಭೂಮಿಯನ್ನು 5 ರೀತಿಯ ಅನುಕೂಲಕ್ಕಾಗಿ ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಅವುಗಳೆಂದರೆ ರಕ್ಷಣೆ, ಕೈಗಾರಿಕಾ ಕಾರಿಡಾರುಗಳು, ಗ್ರಾಮೀಣ ಮೂಲ ಸೌಕರ್ಯ, ಬಡವರಿಗೆ ವಸತಿ ಸೇರಿದಂತೆ ಕೈಗೆಟುಕುವ ದರದಲ್ಲಿ ವಸತಿ ಯೋಜನೆಗಳು ಮತ್ತು ಯಾವುದೇ ತರಹದ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ.
ಹೊಟ್ಟೆಬಾಕ ಗುತ್ತಿಗೆದಾರರು, ಅವಕಾಶವಾದಿ ಅಧಿಕಾರಿಗಳು ಮತ್ತು ಸ್ವಾರ್ಥ ರಾಜಕಾರಣಿಗಳ ಗುಂಪು ಈ ಯೋಜನೆಯ ಫಲಾನುಭವಿಗಳು. ಅದರಲ್ಲೂ ಕಾರ್ಪೊರೇಟ್ ವಲಯದ ಧಣಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳಿಗೆ ಅತಿ ಹೆಚ್ಚಿನ ಲಾಭದಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಇವರ ಪಂಚತಾರಾ ಹೋಟೆಲ್ಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಐಷಾರಾಮಿ ರೆಸಾರ್ಟ್ ಗಳು, ಮೇಲ್ವರ್ಗದವರ ಭಾರೀ ಮಾಲ್ ಗಳು, ಪ್ರತಿಷ್ಠಿತ ಕಾಲೇಜುಗಳು ತಲೆ ಎತ್ತಲಿವೆ. ಹೀಗಾಗಿ ಕಾಯ್ದೆ ಬಡವರ ವಿರುದ್ಧ ಎಂಬುದಂತೂ ಸ್ಪಷ್ಟ. ಸುಗ್ರೀವಾಜ್ಞೆಯಿಂದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟಂತಾಗುತ್ತದೆ ಎಂದು ದೇಶದ ಎಲ್ಲ ವಿರೋಧ ಪಕ್ಷಗಳು ಒಕ್ಕೊರಲಿನಿಂದ ವಿರೋಧಿಸಿವೆ. ಬಿಜೆಪಿಯೇತರ ರಾಜ್ಯ ಸರಕಾರಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೂ ನರೇಂದ್ರ ಮೋದಿ ಸರಕಾರ ಎಲ್ಲರ ವಿರೋಧದ ನಡುವೆಯೂ ಕರಾಳ ಕಾಯ್ದೆಯನ್ನು ಕಾರ್ಯರೂಪಕ್ಕಿಳಿಸಲು, ಅನ್ನ ನೀಡುವ ಮಣ್ಣಿನ ಮಗನಿಗೆ ಮಣ್ಣು ಮುಕ್ಕಿಸಲು ಮುಂದಾಗಿದೆ.
ಈ ಕ್ಷಣದಲ್ಲಿ ನನಗೆ ನೆನಪಾದದ್ದು ನಮ್ಮ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು.  
ಎಂಬತ್ತರ ದಶಕದಲ್ಲಿ ರೈತ ಸಂಘ ಕಟ್ಟಿದ, ನಾಡಿನ ರೈತರ ರಟ್ಟೆಗೆ ಬುದ್ಧಿಗೆ ಬಲ ತುಂಬಿದ, ಸ್ವಾಭಿಮಾನದ ಪಾಠ ಹೇಳಿದ ಪ್ರೊಫೆಸರ್, ಕುಗ್ಗಿಹೋಗಿದ್ದ ರೈತನನ್ನು ಎದ್ದುನಿಲ್ಲಿಸಿ ಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿದ ಮಹಾನುಭಾವ. ತಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದು, ಸರಕಾರಿ ಅಧಿಕಾರಿಗಳ ಜಪ್ತಿಯ ವಿರುದ್ಧ ಮರು ಜಪ್ತಿ ಮಾಡುವಂತೆ ಪ್ರೇರೇಪಿಸಿದ್ದು, ಜನಸೇವೆಯ ಹೆಸರಲ್ಲಿ ದರ್ಬಾರು ನಡೆಸುತ್ತಿದ್ದ ಜನಪ್ರತಿನಿಧಿಗಳ ಚಳಿ ಬಿಡಿಸಿದ್ದು, ನಗುವ ಚಳವಳಿ, ಉಗಿವ ಚಳವಳಿಗಳಂತಹ ಪ್ರತಿ ಸಂದರ್ಭಕ್ಕೂ ಒಂದೊಂದು ವಿಶಿಷ್ಟ ಬಗೆಯ ಹೋರಾಟಗಳನ್ನು ಹುಟ್ಟುಹಾಕಿದ್ದು… ಒಂದಾ ಎರಡಾ. ನೂರಾರು ಚಳವಳಿಗಳ ಮೂಲಕ ರೈತರನ್ನು ಜಾಗೃತರನ್ನಾಗಿಸಿದರು. ರೈತ ಹೋರಾಟಕ್ಕೊಂದು ಹೊಸ ವ್ಯಾಖ್ಯಾನ ನೀಡಿ ಬೇಸಾಯದ ಬದುಕಿಗೆ ಬೆಲೆ ತಂದರು.
ಇದೆಲ್ಲಕ್ಕಿಂತಲೂ ಮುಖ್ಯವಾಗಿದ್ದು, ಪ್ರೊ. ನಂಜುಂಡಸ್ವಾಮಿಯವರು ಜಾಗತೀಕರಣ ತಂದೊಡ್ಡುವ ಅಪಾಯಗಳನ್ನು ಕುರಿತು ಹೇಳಿದ್ದು. ಅದು ದೇಶದ ಜನರ ಜೀವನದ ಮೇಲೆ ಬೀರುವ ಪರಿಣಾಮವನ್ನು ಕುರಿತು ಕರಾರುವಾಕ್ಕಾಗಿ ಕಂಡಿರಿಸಿದ್ದು. ಜಾಗತೀಕರಣದಿಂದ ವಿಶ್ವದ ಇತರ ದೇಶಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲಾಗಿರುವ ದುಷ್ಪರಿಣಾಮಗಳನ್ನು ಬಿಡಿಸಿಟ್ಟಿದ್ದು. ಜಾಗತಿಕ ಬುದ್ಧಿಜೀವಿ ವಲಯವೂ ಬೆಚ್ಚುವಂತೆ ವಿಚಾರ ಮಂಡಿಸಿದ್ದು.
ಇದರ ಜೊತೆಗೆ ಮಲ್ಟಿ ನ್ಯಾಷನಲ್ ಕಂಪನಿಗಳು, ವಿದೇಶಿ ಬಂಡವಾಳ ಮತ್ತು ವಿದೇಶಿ ವಸ್ತುಗಳ ಅವ್ಯಾಹತ ಆಮದುಗಳಿಂದ ನಮ್ಮ ದೇಶಿ ಕುಲಕಸುಬುಗಳಿಗೆ ಆಗುವ ಅಪಾಯವನ್ನು ತರ್ಕಬದ್ಧವಾಗಿ ವಿವರಿಸಿದ್ದು. ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಮತ್ತು ರೈತ ಸಮುದಾಯವನ್ನು ಕಾರ್ಪೊರೇಟ್ ದುರಾಕ್ರಮಣದಿಂದ ರಕ್ಷಿಸಲು ಮಾನ್ಸಾಂಟೋ, ಕೆಂಟಕಿ ಫ್ರೈಡ್ ಚಿಕನ್, ಗ್ಯಾಟ್, ಡಂಕೆಲ್ ಗಳ ವಿರುದ್ಧ ವಿಶಿಷ್ಟ ಬಗೆಯ ಹೋರಾಟಗಳನ್ನು ರೂಪಿಸಿ ರೈತರನ್ನು ಸಜ್ಜುಗೊಳಿಸಿದ್ದು. ಇಡೀ ರೈತ ಸಂಕುಲಕ್ಕೆ ಧೈರ್ಯ ತುಂಬಿದ್ದು.
ಇಂತಹ ಅಪರೂಪದ ಚಿಂತಕ, ಹೋರಾಟಗಾರ, ಸಂತ ಇವತ್ತಿಲ್ಲ. ಅಕಸ್ಮಾತ್ ಇದ್ದಿದ್ದರೆ ದೇಶದ ರೈತರನ್ನು ಸಂಘಟಿಸಿ ಸಂಸತ್ತಿಗೆ ಮುತ್ತಿಗೆ ಹಾಕುತ್ತಿದ್ದರು. ರೈತರು ಏನು ಎನ್ನುವುದನ್ನು; ಭೂಮಿಯ ಮಹತ್ವವನ್ನು ಮೋದಿಯ ಮರ್ಮಕ್ಕೆ ತಾಕುವಂತೆ ಮಾಡುತ್ತಿದ್ದರು. ಹಾಗೆಯೇ ಮನೆಹಾಳು ಕಾಯ್ದೆಯನ್ನು ಕೈಬಿಡುವಂತೆ ನೋಡಿಕೊಳ್ಳುತ್ತಿದ್ದರು.
ಪ್ರೊಫೆಸರ್ ನಂಜುಂಡಸ್ವಾಮಿಯವರೇ ಎಲ್ಲ ಕಾಲಕ್ಕೂ, ಎಲ್ಲದಕ್ಕೂ ಇರಬೇಕಾಗಿತ್ತು ಎಂಬುದು ಕೊಂಚ ದುರಭಿಮಾನವಾಗಬಹುದು. ಹಾಗೆಯೇ ಅದು ಹೊಸಬರು ಬರದಂತೆ, ಬೆಳೆಯದಂತೆಯೂ ಕಾಣಬಹುದು. ಹಾಗಾಗಿ ಅವರ ಮಾರ್ಗದಲ್ಲಿಯೇ ನಡೆಯುತ್ತಿರುವ ಸಮಾನ ಮನಸ್ಕರು, ಬಂಡವಾಳಶಾಹಿಯಿಂದಲೇ ಭಾರತ ಮುಂದಕ್ಕೆ ಬರಬೇಕೆ, ಭಾರತ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತ ರಾಷ್ಟ್ರವಾಗಿಬಿಡುತ್ತದೆಯೆ, ಇದರಿಂದ ಭಾರತದ ಕೃಷಿಗೆ ಕೈಗಾರಿಕೆ ಮತ್ತು ಜನತೆಗೆ ಒಳಿತಾಗುತ್ತದೆಯೆ ಎಂದು ಯೋಚಿಸಬೇಕಾದ ತುರ್ತಿದೆ.
ಹೀಗೆ ಯೋಚಿಸಿ ಕಾರ್ಯರೂಪಕ್ಕೆ ಇಳಿಯಬೇಕಾದ ಸಮಾಜಮುಖಿ ಚಿಂತಕರು, ಜನಪರ ನಿಲುವಿನ ವ್ಯಕ್ತಿಗಳು ಬೇಕಾದಷ್ಟು ಜನರಿದ್ದಾರೆ. ಇರುವ ಕಾರಣಕ್ಕೆ ಇರುವಿಕೆಯನ್ನು ಸಾಬೀತುಪಡಿಸುವುದಕ್ಕಾದರೂ, ಕಾಲಕಾಲಕ್ಕೆ ಎದುರಾಗುವ ಪ್ರಭುತ್ವದ ಸವಾಲುಗಳಿಗೆ ಉತ್ತರ ನೀಡಬೇಕಾಗಿದೆ. ಅದಕ್ಕೆ ಸಹಕಾರಿಯಾಗಿ ಪ್ರೊಫೆಸರ್ ಕಟ್ಟಿ ಬೆಳೆಸಿದ ರೈತ ಸಂಘದೊಂದಿಗೆ ಗುರುತಿಸಿಕೊಂಡವರು; ಹೋರಾಟ, ಚಳವಳಿ, ಮುಷ್ಕರ, ಧರಣಿಗಳಲ್ಲಿ ಅವರೊಂದಿಗೆ ಹೆಜ್ಜೆ ಹಾಕಿದವರು; ಬದಲಾವಣೆ ಬಯಸುವ ಹೊಸ ತಲೆಮಾರಿನವರಿದ್ದಾರೆ. ಇವರೆಲ್ಲರೂ ಸ್ವಲ್ಪ ಸ್ವಪ್ರತಿಷ್ಠೆ, ಸ್ವಹಿತಾಸಕ್ತಿ, ಸ್ವಾರ್ಥವನ್ನು ಬಿಟ್ಟು ಒಂದಾದರೆ, ಒಕ್ಕೊರಲಿನಿಂದ ಭೂ ಕಾಯ್ದೆಯನ್ನು ವಿರೋಧಿಸಿದರೆ, ಅದಕ್ಕೆ ಕರ್ನಾಟಕವೇ ಮುಖ್ಯ ಭೂಮಿಕೆಯಾದರೆ- ಪ್ರೊಫೆಸರ್ ಜೀವಂತ, ಎಂದೆಂದಿಗೂ.