Saturday, April 19, 2014

ಈ ನೆಲದ, ನನ್ನ ಜನರ ಘನತೆಯನ್ನು ಉಳಿಸುವ ಸಲುವಾಗಿ ಕಣಕ್ಕಿಳಿದಿದ್ದೇನೆ: ಕೋಟಿಗಾನಹಳ್ಳಿ ರಾಮಯ್ಯ

ಕೋಟಿಗಾನಹಳ್ಳಿ ರಾಮಯ್ಯ
ಮಾಜಿ ಬ್ಯಾಂಕ್ ಉದ್ಯೋಗಿ, ಪತ್ರಕರ್ತ, ಕವಿ, ನಾಟಕಕಾರ, ಹೋರಾಟಗಾರ ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ತಲೆಗೆ ಟೋಪಿ ಹಾಕಿಕೊಂಡು, ಕೈಯಲ್ಲಿ ಪೊರಕೆ ಹಿಡಿದುಕೊಂಡು, ಒಂದಷ್ಟು ಯುವಕ-ಯುವತಿಯರನ್ನು ಕಟ್ಟಿಕೊಂಡು ಮತ ಯಾಚಿಸುತ್ತಿದ್ದಾರೆ. ಕೆಲವು ಚಲನಚಿತ್ರಗಳಿಗೆ, ಟಿವಿ ಧಾರಾವಾಹಿಗಳಿಗೆ ಸಂಭಾಷಣೆ ಮತ್ತು ಗೀತರಚನೆಕಾರರಾಗಿಯೂ ದುಡಿದಿರುವ ರಾಮಯ್ಯ, ಸದ್ಯಕ್ಕೆ ಕೋಲಾರದ ಹತ್ತಿರದ ಅಂತರಗಂಗೆ ಬೆಟ್ಟದಲ್ಲಿ ನೆಲಮೂಲ ಸಂಸ್ಕೃತಿಯನ್ನು ಸಾರುವ ‘ಆದಿಮ’ ಸಂಸ್ಥೆ ಕಟ್ಟಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಆ ಮೂಲಕ ದೇಸಿ ಸಂಸ್ಕೃತಿಯನ್ನು ಉಳಿಸುವ ವಿಸ್ತರಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ‘ಈ ನೆಲದ, ನನ್ನ ಜನರ ಘನತೆಯನ್ನು ಉಳಿಸುವ ಸಲುವಾಗಿ ಈ ಚುನಾವಣಾ ರಾಜಕಾರಣಕ್ಕೆ ಇಳಿದಿದ್ದೇನೆ’ ಎನ್ನುವ ರಾಮಯ್ಯ, ಆಪ್ ಪಕ್ಷದ ಕೇಜ್ರಿವಾಲರನ್ನು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಹೋಲಿಸಿದ್ದಾರೆ. ಹಾಗೆಯೇ ಮೋದಿಯನ್ನು ಕಾರ್ಪೋರೇಟ್ ಮತ್ತು ಮಾಧ್ಯಮ ವಲಯದ ಸೃಷ್ಟಿ ಎಂದಿದ್ದಾರೆ. ಇಂತಹ ಅಪರೂಪದ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯನವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
* ನೀವು ದಲಿತ ಹೋರಾಟಗಾರರಾಗಿ, ಚಿಂತಕರಾಗಿ ಗುರುತಿಸಿಕೊಂಡವರು, ಎಪಿಪಿಯನ್ನು ಆಯ್ಕೆ ಮಾಡಿಕೊಂಡಿದ್ದೇಕೆ?
ರಾಮಯ್ಯ: ಎಪಿಪಿ ನಮ್ಮ ದೇಶದ ಹೊಸ ಆಶಾವಾದ. ಇದು ಭ್ರಷ್ಟಾಚಾರವಿರೋದಿ, ಮತಾಂಧತೆಯ ವಿರೋಧಿ ಹಾಗೂ ಜಾತಿ ಪದ್ಧತಿ ವಿರೋಧಿಯಾಗಿದೆ. ಇದು ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯನ್ನು ಪ್ರೇರೇಪಿಸುತ್ತಿದೆ. ನನ್ನನ್ನು ಅರವಿಂದ್ ಕೇಜ್ರಿವಾಲ್ ಅಪಾರವಾಗಿ ಪ್ರಭಾವಿಸಿದ್ದಾರೆ. ನನಗೆ ಅವರು ಲಾಲ್ ಬಹದ್ದೂರ್ ಶಾಸ್ತ್ರಿಯಂತೆ ಕಾಣುತ್ತಿದ್ದಾರೆ. ಕೇಜ್ರಿವಾಲ್ ರಾಹುಲ್ ಗಾಂಧಿಯಂತಲ್ಲ. ಅವರಂತೆ ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ನಮ್ಮ ನಿಮ್ಮಂತೆ ಶ್ರೀಸಾಮಾನ್ಯರು. ಅಂಥವರೆ ನಮಗೆ ಇವತ್ತು ಬೇಕಾಗಿರುವುದು. 
* ಕಾನ್ಶಿರಾಂ ಕಟ್ಟಿದ ಬಿಎಸ್‌ಪಿ ಇತ್ತಲ್ಲ?
ರಾಮಯ್ಯ: ಅಂಬೇಡ್ಕರ್ ಒಂದು ತಾತ್ವಿಕತೆಯನ್ನು ನೀಡಿದರು. ಅದು ಸ್ವಾತಂತ್ರ್ಯದತ್ತ ತುಡಿಯುವ ತಾತ್ವಿಕ ಸಿದ್ಧಾಂತವಾಗಿತ್ತು. ಇದು ಬಹಳ ಮುಖ್ಯವಾದದ್ದು. ಆ ಪಕ್ಷ ತಾತ್ವಿಕ ವಿಸ್ತರಣೆಯತ್ತ ಚಿಂತಿಸುವುದಿಲ್ಲ.
* ನಾಟಕ, ಸಂಸ್ಕೃತಿ ಅಂತಿದ್ದವರು, ಈ ಚುನಾವಣಾ ರಾಜಕಾರಣಕ್ಕೆ ಇಳಿಯಲು ಪ್ರೇರಣೆ ಏನು?
ರಾಮಯ್ಯ: ಹೊಸ ಪರಿಭಾಷೆಯೊಂದರ ಅನ್ವೇಷಣೆಗಾಗಿ, ವ್ಯಕ್ತಿ ಘನತೆ ಮತ್ತು ನೆಲದ ಘನತೆ ಮುಖ್ಯವಾದದ್ದು. ಇವು ಸಮಾನತೆಯ ನೆಲೆಗಟ್ಟುಗಳು. ಇವು ಅಪಮಾನಿಸಲ್ಪಟ್ಟಲ್ಲಿ ಬಾಯಿ ಮುಚ್ಚಿಕೊಂಡು ಸುಮ್ಮನಿರಲಾಗದು. ಎಲ್ಲಾ ಪಕ್ಷಗಳೂ ಜನರನ್ನು ಆತ್ಮವಂಚಕ ಸ್ಥಿತಿಯತ್ತ ತಳ್ಳುವತ್ತ ಕಾರ್ಯನಿರತವಾಗಿವೆ. ಇದು ಅನೈತಿಕ ಮತ್ತು ಸಂವಿಧಾನಬಾಹಿರ. ಗುಜರಾತಿನ ಪಾನನಿಷೇಧ ಸಹ ಅನೈತಿಕ. ಇದು ಚಿತ್ತಸ್ವಾಸ್ಥವಿರುವ ಜನ ಮಾಡುವ ಕೆಲಸವಲ್ಲ. ಇದು ಅಸಹ್ಯ. ಇದು ಮುಂದಿನ ಪೀಳಿಗೆಯನ್ನು ಭಯಾನಕಗೊಳಿಸುತ್ತದೆ. ಮತ್ತು ಪ್ರತಿಗಾಮಿಗಳನ್ನಾಗಿಸುತ್ತದೆ. ಕರ್ನಾಟಕದಲ್ಲಿ ಒಂದೆಡೆ ಒಂದು ರೂಪಾಯಿಗೆ ಕೇಜಿ ಅಕ್ಕಿ ಕೊಡುತ್ತಾ ಮತ್ತೊಂದೆಡೆ ಮದ್ಯದ ಬೆಲೆಯನ್ನು ಏರಿಸಿರುವುದು ಒಂದು ಅನೈತಿಕ ಪಿತೂರಿ. ನಮ್ಮದು ಬಹು ಸ್ತರಗಳ ದೇಶ. ನನ್ನ ಪ್ರಕಾರ ದೇಶದ ಊಳಿಗಮಾನ್ಯ ಭಗ್ನಾವಶೇಷಗಳ ವಿರುದ್ಧ ಹೋರಾಡುವ ಸ್ಥಿರತೆಯನ್ನು ತಳಮಟ್ಟದಿಂದಲೇ ಕಟ್ಟಬೇಕಿದೆ.
* ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಇದೆಯೇ?
ರಾಮಯ್ಯ: ಇಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಮೋದಿ ಕಾರ್ಪೊರೇಟ್ ರಾಜಕಾರಣಿ ಮತ್ತು ಮಾಧ್ಯಮಗಳಿಂದ ನಿರ್ವಹಿಸಲ್ಪಡುತ್ತಿರುವ ವ್ಯಕ್ತಿ ಮಾತ್ರ. ಅವರು ಇದಕ್ಕಿಂತ ಹೆಚ್ಚೇನೂ ಅಲ್ಲ.
* ನಿಮ್ಮ ಎದುರಾಳಿ ಮುನಿಯಪ್ಪ, ಆರು ಬಾರಿ ಗೆದ್ದವರು, ಅವರನ್ನು ಹೇಗೆ ಎದುರಿಸುತ್ತೀರಾ?
ರಾಮಯ್ಯ: ಕೋಲಾರದಲ್ಲಿ ನೀರಿನದೇ ದೊಡ್ಡ ಸಮಸ್ಯೆ. ಈ ಜಿಲ್ಲೆಯಲ್ಲಿ ಒಂದೇ ಒಂದು ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆ ಇಲ್ಲ. ಹೀಗಿದ್ದಾಗ ನೀವು ಬೌದ್ಧಿಕವಾಗಿ ಬೆಳೆಯಲು ಹೇಗೆ ಸಾಧ್ಯ? ಮುನಿಯಪ್ಪ ಕಳೆದ 23 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಈತ ಸಹಕಾರಿ ಕೃಷಿಯನ್ನು ಉತ್ತೇಜಿಸಲಿಲ್ಲ, ಸುಸ್ಥಿರ ಆರ್ಥಿಕತೆಯ ಬಗ್ಗೆ ಗಮನ ಕೊಡಲಿಲ್ಲ. ಎಷ್ಟು ದಿನಾ ಅಂತ ಜನರನ್ನು ವಂಚಿಸುತ್ತಾ ಹೋಗುವುದು? ಈ ಬಾರಿ ಸಾಧ್ಯವಿಲ್ಲ. ಅವರಿಗೆ ಸೋಲು ಖಚಿತ.
 * ನಿಮ್ಮ ಚುನಾವಣಾ ಪ್ರಚಾರ ಮತ್ತು ಜನರನ್ನು ತಲುಪುವ ಬಗೆ ಹೇಗೆ?
ರಾಮಯ್ಯ: ನಾನು ಶೂನ್ಯದಿಂದ ಎದ್ದು ಬಂದವನು. ನನ್ನ ಬಳಿ ಹಣವಿಲ್ಲ. ಆದರೆ ಜನರ ಸುಪ್ತ ಪ್ರಜ್ಞೆಯನ್ನು ಮುಟ್ಟುವುದು ತಿಳಿದಿದೆ. ನಾನು ಈಗಾಗಲೇ ಪುರಾಣದಂತೆ ಅವರನ್ನು ತಲುಪಿದ್ದೇನೆ. ನಾನು ಅವರಿಗೆ ಗೊತ್ತು. ಕಳೆದ ನಲವತ್ತು ವರ್ಷಗಳಿಂದ ಅವರೊಂದಿಗಿದ್ದೇನೆ. ನಾನು ನನಗೆ ಗೊತ್ತಿರುವ ಹಾಡು, ಸಂಗೀತ, ನೃತ್ಯ, ನಾಟಕಗಳ ಮೂಲಕ ಜನರನ್ನು ತಲುಪುತ್ತೇನೆ. ನಾನು ಓಟು ಕೇಳುವುದಿಲ್ಲ. ಬದಲಾಗಿ ಅವರನ್ನು ಜಾಗೃತಗೊಳಿಸುತ್ತೇನೆ. ಅವರ ಆತ್ಮವನ್ನು ಮುಟ್ಟುತ್ತೇನೆ.
* ಕಣದಲ್ಲಿರುವವರ ಪೈಕಿ ಯಾರು ನಿಮ್ಮ ನಿಜವಾದ ಪ್ರತಿಸ್ಪರ್ಧಿ?
ರಾಮಯ್ಯ: ಎದುರಾಳಿಗಳಾದವರಿಗೆ ಹೋರಾಡುವ ಘನತೆ ಇರಬೇಕಾಗುತ್ತದೆ. ನನ್ನ ಎದುರಿಗೆ ನಿಂತಿರುವವರೆಲ್ಲಾ ಅನೈತಿಕ ಹಾಗೂ ವಿರೂಪಿ ಪ್ರತಿಸ್ಫರ್ಧಿಗಳು.
* ಇವತ್ತಿನ ಸಂದರ್ಭದಲ್ಲಿ ಬದಲಾವಣೆ, ಕ್ರಾಂತಿ ಸಾಧ್ಯವೆ?
ರಾಮಯ್ಯ: ನಾನು ಇಲ್ಲಿಯೇ ಬೇರು ಬಿಟ್ಟವನು. ಈ ನೆಲದ ಘಮಲು ನನಗೆ ಗೊತ್ತಿದೆ. ಬದಲಾವಣೆ, ಕ್ರಾಂತಿ ಅಂತೆಲ್ಲ ಮಾತನಾಡಲ್ಲ, ಮಾಡಿ ತೋರಿಸುತ್ತೇನೆ.
(ವಾರ್ತಾ ಭಾರತಿ, ಏಪ್ರಿಲ್ 16ರಲ್ಲಿ ಪ್ರಕಟಿತ)

No comments:

Post a Comment